ರೇರ್ ಫೋಟೋ : ಸಂಡೂರು ಗುಡ್ಡಕ್ಕೆ ಹಸುರು ಕುಪ್ಪಸ

ಇದೀಗ, ಹಚ್ಚ ಹಸಿರು ಬಣ್ಣಕ್ಕೆ ತಿರುಗುತ್ತಿರುವ ಸಂಡೂರಿನ ಪ್ರಕೃತಿ ಸೌಂದರ್ಯದ ಫೋಟೋವೊಂದನ್ನ ಕಳುಹಿಸಿದ್ದಾರೆ. ಭೂತಾಯಿಯನ್ನ ಮನಸೋ ಇಚ್ಛೆ ಬಗೆದು ತಿಂದು, ಹರಿದು ಹಾಕಿದ್ದ ಬುಲ್ಡೋಜರ್ ಗಳು,
ಜೆಸಿಬಿಗಳು, ಕ್ರಷಿಂಗ್ ಮಷೀನ್ಗಳ ಸದ್ದಡಗಿದ್ದು, ಹಸಿರಿನ ಸಿರಿ ಹೊದ್ದು ನಿಂತ ಬೆಟ್ಟಗುಡ್ಡಗಳ ಫೋಟೋ ಇದಾಗಿದೆ.
ರಕ್ತಪಾತ- ರಕ್ತಸಿಕ್ತ ಫೋಟೋಗಳ ಜೊತೆಗೆ, ಗಣಿ ನೆಲದಿಂದ ಚಿಮ್ಮುತ್ತಿದ್ದ ಕೆಂಪು ಧೂಳಿನ ಫೊಟೋಗಳನ್ನ ತೆಗೆಯುತ್ತಿದ್ದ ಸ್ವಾಮೀ, ಈ ಎರಡ್ಮೂ ದಿನಗಳ ಹಿಂದೆ ಸಂಡೂರಿಗೆ ಹೋಗಿದ್ದಾಗ, ಹಸಿರಿನಿಂದ ಚಿಮ್ಮುತ್ತಿದ್ದ ಸಂಡೂರಿನ ಬೆಟ್ಟಗುಡ್ಡಗಳ ಈ ಫೋಟೋವನ್ನ ಬಹಳ ಖುಷಿಯಿಂದ ಸೆರೆ ಹಿಡಿದಿದ್ದಾರೆ.
ಈ ಕೆಲವೇ ವರ್ಷಗಳ ಹಿಂದೆ, ಬಾಯಿ-ಮೂಗಿಗೆ ಬಟ್ಟೆ ಬಿಗಿದುಕೊಂಡು ಸಾವಿರಾರು ಫೋಟೋಗಳನ್ನ ತೆಗೆದಿರುವ ನಮ್ಮ ಸ್ವಾಮೀ, ಸುಂದರ ಪರಿಸರದ ಈ ಫೋಟೋ ಮಾತ್ರ ಬಹಳ ಖುಷಿಯಿಂದ ತೆಗೆದ ಹಾಗಿದೆ. ಅಂದಹಾಗೆ, ಭೂಮಿಯನ್ನ ಮನಬಂದಂತೆ ಬಗೆಯುತ್ತಿದ್ದ ಯಂತ್ರಗಳ ಮೇಲೂ ತಮ್ಮ ಸಿಟ್ಟು ತೀರಿಸಿಕೊಂಡಂತಿದ್ದು, 'ಮಕ್ಳಾ, ನಿಮ್ ಗತಿನೂ ಹೀಗೆ ಆಗೋದು' ಅಂತ ಭೂಮಿಯನ್ನ ಸಿಕ್ಹಾಂಗ, ಬಗೆದೂ ಬಗೆದೂ ತಿಂದವರಿಗೆ ಈ ಫೋಟೋದಲ್ಲೇ ಮೆಸೇಜ್ ನೀಡಿದಂತಿದೆ.
ಈ ಸ್ವಾಮೀ ಫೋಟೋ ತೆಗೆಯುವ ಸಂದರ್ಭಗಳಲ್ಲಿ ಈ ಹಿಂದೆ ನನಗೆ ಹೊಟ್ಟೆಕಿಚ್ಚೂ ಆದದ್ದೂ ಉಂಟು. ಇವ್ರು ತೆಗೆಯೋ ಯಾಂಗಲ್ ಗಳಲ್ಲಿ ಎಷ್ಟೇ ಫೋಟೋಗಳನ್ನ ಸೆರೆ ಹಿಡಿಯಲು ಟ್ರೈ ಮಾಡಿದ್ರೂ ಆಗ್ಲೇ ಇಲ್ಲ. ಅಷ್ಟಕ್ಕೂ 'ಗುರುಗಳು' ಅಲ್ವಾ!?
ಅದ್ರಲ್ಲೂ, ಸಿರುಗುಪ್ಪ ತಾಲೂಕಿನ ಹಳ್ಳಿಯೊಂದರಲ್ಲಿ ನೆರೆಹಾವಳಿ ವೀಕ್ಷಿಸಲು ಬಂದಿದ್ದ ಕೇಂದ್ರ ತಂಡದ ವಾಹನಗಳ ಭರಾಟೆಯನ್ನ ಕುಸಿದು ಬಿದ್ದ ಮನೆಯ ಮುಂಬಾಗಿಲ ಚೌಕಟ್ಟಿನಲ್ಲೇ ಅಚ್ಚರಿಯಿಂದ ನೋಡ್ತಿದ್ದ ಮಹಿಳೆಯೊಬ್ಬರ ಆ ಫೋಟೋ ಸ್ವಾಮೀಯ ಟೈಂಮಿಂಗ್ ಗೆ ಸಾಕ್ಷಿ.
ಇಡೀ ನೆರೆಹಾವಳಿಯ ವಾತಾವರಣವನ್ನೇ ಆ ಫೋಟೋ, ಸಾವಿರ ಅಲ್ಲ, ಲಕ್ಷಾಂತರ ಪದಗಳಲ್ಲಿ ಹಿಡಿದಿರುವಂತಿತ್ತು. ಮೊನ್ನೆಯಷ್ಟೇ, ಬಳ್ಳಾರಿಯ ನನ್ನ ನೆಚ್ಚಿನ ಪುರುಷೋತ್ತಮ ಹಂದ್ಯಾಳ್ ಕಳುಹಿಸಿದ್ದ ಸಂಡೂರಿನ ಸುಶೀಲಾನಗರದ ಅದ್ಭುತ ಫೋಟೋದ ಸಂಭ್ರಮದ ಜೊತೆಗೆ ಇದೂ ಸೇರ್ಪಡೆಯಾಗಿದೆ.












Click it and Unblock the Notifications