ಲೋಕಪಾಲ ಬಿಕ್ಕಟ್ಟು: ಇಂದು ಸರ್ವ ಪಕ್ಷ ಸಭೆ, ನಿರ್ಣಯ ಸಾಧ್ಯತೆ
ಈ ಮಧ್ಯೆ ಮಂಗಳವಾರ ರಾತ್ರಿ ಅಣ್ಣಾ ನಿಕಟವರ್ತಿಗಳೊಂದಿಗೆ ಸರಕಾರಿ ಸಂಧಾನಕಾರ ಪ್ರಣಬ್ ಮುಖರ್ಜಿ ಮಾತುಕತೆ ನಡೆಸಿದೆ. ಲೋಕಪಾಲ ಮಸೂದೆ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಮಾತುಕತೆಯಿಂದ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗದೆ ಅಪೂರ್ಣಗೊಂಡಿತು. ಬುಧವಾರ ಉಭಯ ಬಣಗಳು ಪುನಃ ಸಭೆ ಸೇರಲಿವೆ.
ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಕಾನೂನು ಸಚಿವ ಸಲ್ಮಾನ್ ಖುರ್ಷಿದ್, ಅಣ್ಣಾ ತಂಡದ ಅರವಿಂದ್ ಕೇಜ್ರಿವಾಲ್, ಕಿರಣ್ ಬೇಡಿ ಹಾಗೂ ಪ್ರಶಾಂತ್ ಭೂಷಣ್ ಅವರ ನಡುವೆ ಮೂರು ಗಂಟೆ ಮಾತುಕತೆ ನಡೆಯಿತು.
ಅನಂತರ ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಮತ್ತು ಅರವಿಂದ್ ಕೇಜ್ರಿವಾಲ್ ಸೇರಿ ಚರ್ಚೆ ನಡೆಸಿದರು. ಇದರ ಬೆನ್ನಲ್ಲೇ ರಾಹುಲ್ ಗಾಂಧಿ, ಹಿರಿಯ ಸಚಿವರಾದ ಪ್ರಣವ್ ಮುಖರ್ಜಿ, ಎ. ಕೆ. ಆಂಟನಿ ಅವರೊಂದಿಗೆ ಪ್ರಧಾನಿ ಸಮಾಲೋಚಿಸಿದರು. ಬಳಿಕ ಸಿಂಗ್ ಮತ್ತು ರಾಹುಲ್ ಇಬ್ಬರೇ ಮಾತುಕತೆ ನಡೆಸಿದರು. ರಾಹುಲ್ ಮತ್ತು ಸಿಂಗ್ ಚರ್ಚೆಯ ಪರಿಣಾಮವೇ ಈ ಪತ್ರ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.
ಸಂಸತ್ತಿನ ಸ್ಥಾಯಿ ಸಮಿತಿ ಮುಂದಿರುವ ಸರ್ಕಾರದ ಲೋಕಪಾಲ ಮಸೂದೆಯನ್ನು ಹಿಂದಕ್ಕೆ ಪಡೆದು ನಾಗರಿಕ ಸಂಘಟನೆಗಳ ಜನ ಲೋಕಪಾಲ ಮಸೂದೆಯನ್ನೇ ಮಂಡಿಸಬೇಕು. ಈ ಮಸೂದೆಯಲ್ಲಿರುವ ಸಣ್ಣಪುಟ್ಟ ಲೋಪಗಳನ್ನು ಕಾನೂನು ಇಲಾಖೆಯು ಸರಿಪಡಿಸಿ, ಈಗ ನಡೆಯುತ್ತಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲೇ ಅಂಗೀಕರಿಸಬೇಕು ಎಂದು ಅಣ್ಣಾ ತಂಡ ಹಟ ಹಿಡಿದಿದೆ.