ಬೀದಿಬದಿ ಅಂಗಡಿಗಳಿಗೆ ಸುಣ್ಣ, ಮಂಟಪಗಳಿಗೆ ಬಣ್ಣ
ಭಾರತೀಯ ಪುರಾತತ್ವ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳ ಮುತುವರ್ಜಿಯಿಂದ ಮಂಟಪಗಳಿಗೆ ಸುಣ್ಣ - ಬಣ್ಣ ಬಳಿಯುವ ಕೆಲಸ ಸಾಕಷ್ಟು ಎಚ್ಚರಿಕೆಯಿಂದಲೇ ನಡೆದಿದೆ. ಸುಣ್ಣ ಮತ್ತು ಬಣ್ಣ ಹಚ್ಚುವ ಸಂದರ್ಭದಲ್ಲಿ ಪ್ರಾಚೀನ ಸ್ಮಾರಕಗಳಲ್ಲಿಯ ಕಲೆ - ಹಚ್ಚಿದ್ದ ಬಣ್ಣ ಹಾಳಾಗದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಶ್ರೀವಿರೂಪಾಕ್ಷೇಶ್ವರ ದೇವಸ್ಥಾನದ ಪ್ರಾಂಗಣದ ಇಕ್ಕೆಲಗಳಲ್ಲಿ ಸಾಲುಮಂಟಪಗಳೇ ಇವೆ. ಅಲ್ಲಲ್ಲಿ ಸಣ್ಣಪುಟ್ಟ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಒಂದು ಮಂಟಪದಲ್ಲಿ ವಿಜಯನಗರ ಸಾಮ್ರಾಜ್ಯದ ಲಾಂಛನ, ವಂಶವೃಕ್ಷ, ಖ್ಯಾತನಾಮ ಅರಸರು, ಇನ್ನಿತರೆಗಳ ವಿವರಗಳಿವೆ. ಶತಮಾನಗಳಷ್ಟು ಹಳೆಯದಾದ ಬಣ್ಣದ ಚಿತ್ರಗಳಿವೆ.
ಸುಮಾರು 30 ಜನ ಸಿಬ್ಬಂದಿ ಸುಣ್ಣ - ಬಣ್ಣ ಹಚ್ಚುತ್ತಿದ್ದಾರೆ. ಪುರಾತತ್ವ ತಜ್ಞ ಸತ್ಯಜಿತ್ ಅವರು ಸ್ಥಳದಲ್ಲೇ ಇದ್ದು ಬಣ್ಣ ಹಚ್ಚುವ ಸಿಬ್ಬಂದಿಗೆ ಅಗತ್ಯ ಸಲಹೆ - ಸೂಚನೆಗಳನ್ನು ನೀಡುತ್ತಿದ್ದಾರೆ. ಅಗತ್ಯ ಮುಂಜಾಗ್ರತೆಗಳನ್ನು ಕೈಗೊಂಡು ಸ್ಮಾರಕಗಳಲ್ಲಿಯ ಪ್ರಾಚೀನತೆಯನ್ನು ಕಾಪಾಡಲು ಶ್ರಮಿಸುತ್ತಿದ್ದಾರೆ.