ಯಡ್ಡಿಯನ್ನು ಬೈದರೂ ಮಂತ್ರಿಗಿರಿ ಪಡೆದ ರಾಮದಾಸ?
ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಸ್ಥಾನ ಪಡೆದು ವಿಜೃಂಭಿಸಿದ್ದ ಎಸ್.ಎ.ರಾಮದಾಸ್ ಗೆ ಹೊಸ ಸರ್ಕಾರದಲ್ಲಿ ಸಚಿವ ಸ್ಥಾನ ಕೈ ತಪ್ಪಲಿದೆ ಎಂಬ ಸುದ್ದಿ ಹಬ್ಬಿತ್ತು. ಇದಕ್ಕೆ ಕಾರಣವೂ ಇತ್ತು.
ಯಡಿಯೂರಪ್ಪ ರಾಜೀನಾಮೆಗೆ ಹೈಕಮಾಂಡ್ ಒತ್ತಾಯ ಹೇರಿದ ವೇಳೆಯಲ್ಲಿ 'ಯಡಿಯೂರಪ್ಪ ಅವರು ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನದಿಂದ ಕೆಳಗಿಳಿಯಬೇಕು ಒಂದು ವೇಳೆ ರಾಜೀನಾಮೆ ನೀಡದಿದ್ದರೆ ಶಿಸ್ತುಕ್ರಮ ಜರುಗಿಸಬೇಕಾಗುತ್ತದೆ' ಎಂದು ಮಾಧ್ಯಮಗಳ ಮುಂದೆ ನಾಲಗೆ ಹರಿಬಿಟ್ಟಿದ್ದರು.
ಇದರಿಂದ ಸಹಜವಾಗಿ ಯಡಿಯೂರಪ್ಪ ಅಭಿಮಾನಿಗಳು ಕೆಂಡಾಮಂಡಲವಾಗಿ ರಾಮದಾಸ್ ಅವರಿಗೆ ಸಚಿವ ಸ್ಥಾನ ನೀಡದಂತೆ ಆಗ್ರಹಿಸಿ, ಪ್ರತಿಭಟನೆ ನಡೆಸಿದ್ದರು. ಆದರೆ, ಮೈಸೂರು ಭಾಗವನ್ನು ಸಮರ್ಥವಾಗಿ ಪ್ರತಿನಿಧಿಸಲು ಯಾರು ಇಲ್ಲ ಎಂಬ ಅಂಶವನ್ನು ಪರಿಗಣಿಸಿ ರಾಮದಾಸ್ ಗೆ ಮತ್ತೆ ಮಣೆ ಹಾಕಲಾಗಿದೆ. ರಾಮದಾಸ್ ಅವರನ್ನು ಬಿಟ್ಟರೆ ಸಿಎಚ್ ವಿಜಯಶಂಕರ್ ಅವರು ಅರಣ್ಯ ಸಚಿವರಾಗಿದ್ದರು.
ಅಪ್ಪಿ ತಪ್ಪಿ ಕೂಡಾ ಶಂಕರಲಿಂಗೇಗೌಡ ಅವರಿಗೆ ಸಚಿವ ಸ್ಥಾನ ನೀಡುವ ತಪ್ಪು ಕೆಲಸ ಮಾಡುವ ಮನಸ್ಸು ಬಿಜೆಪಿ ನಾಯಕರಿಗಿಲ್ಲ. ರಾಮದಾಸ್ ಸಚಿವರಾಗಲು ಜಗದೀಶ್ ಶೆಟ್ಟರ್ ಬಣ ಕೂಡಾ ವಿರೋಧಿಸುತ್ತಿಲ್ಲ ಹೀಗಾಗಿ ಯಡ್ಡಿಯನ್ನು ಬೈದರೂ ಸಚಿವ ಸ್ಥಾನ ಗಿಟ್ಟಿಸಿಕೊಂಡ ಸಾಧನೆಯನ್ನು ರಾಮದಾಸ್ ಮೆರೆದಿದ್ದಾರೆ.