ಕೊನೆಗೂ ಗೆದ್ದ ಯಡಿಯೂರಪ್ಪನವರ ಹಠಮಾರಿತನ

ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ, ಜಗದೀಶ್ ಶೆಟ್ಟರ್, ಅನಂತ್ ಕುಮಾರ್, ಆರ್ ಅಶೋಕ್ ಮುಂತಾದವರಿಗೆ ತಮ್ಮ ತಾಕತ್ತು ಏನೆಂಬುದನ್ನು ಯಡಿಯೂರಪ್ಪ ಮತ್ತೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಜೊತೆಗೆ, ಬಿಜೆಪಿ ಹೈಕಮಾಂಡಿಗೂ ಈ ಮೂಲಕ ಬಿಸಿಯನ್ನು ಮುಟ್ಟಿಸಿದ್ದಾರೆಂದರೂ ತಪ್ಪಲ್ಲ.
ಜು.28ರಂದು ರಾಜೀನಾಮೆ ಸಲ್ಲಿಸಲು ಹೊರಟಿದ್ದ ಯಡಿಯೂರಪ್ಪ ಉಲ್ಟಾ ಹೊಡೆದಿದ್ದರು. ತಮ್ಮ ಬೆಂಬಲಿಗರೊಂದಿಗೆ ಸತತವಾಗಿ ಮಾತನಾಡುತ್ತ 70 ಶಾಸಕರ ಕೋಟೆಯನ್ನು ಕಟ್ಟಿಕೊಂಡು ಬಿಜೆಪಿಯನ್ನು ಇಬ್ಭಾಗ ಮಾಡಲು ಯಶಸ್ವಿಯಾಗಿದ್ದರು. ಯಡಿಯೂರಪ್ಪ ತಿರುಗಿಬಿದ್ದಿದ್ದರಿಂದ ಈಶ್ವರಪ್ಪ ಬಣ ಸಹಜವಾಗಿ ಅಸಮಾಧಾನಗೊಂಡಿತ್ತು.
ರಾಜೀನಾಮೆ ಕೊಟ್ಟರೂ ಶೋಭಾ ಮುಖ್ಯಮಂತ್ರಿಯಾಗಬೇಕೆಂದು ಷರತ್ತು ಮೊದಲಿಗೆ ಒಡ್ಡಿದ್ದರು. ಅದು ಸಾಧ್ಯವಾಗದ್ದರಿಂದ ತಮ್ಮ ಆಯ್ಕೆಯ ಸದಾನಂದ ಗೌಡರೇ ಸಿಎಂ ಆಗಬೇಕೆಂದು ಬೇಡಿಕೆ ಇಟ್ಟರು. ಅದೂ ಸಾಧ್ಯವಾಗದ್ದರಿಂದ, ಒಮ್ಮತದ ಅಭ್ಯರ್ಥಿ ಸಿಗದೆ ಗುಪ್ತ ಮತದಾನ ಮಾಡುವ ಹಂತಕ್ಕೆ ಯಡಿಯೂರಪ್ಪ ತಂದಿಟ್ಟರು.
ಡಿವಿ ಸದಾನಂದ ಗೌಡರು ಮುಖ್ಯಮಂತ್ರಿಯಾಗಲೆಂದು ಅವರ ಹಿಂಬಾಲಕರು ಮಂಗಳವಾರ ಕುಕ್ಕೆ ಸುಬ್ರಮಣ್ಯದಲ್ಲಿ ಉರುಳು ಸೇವೆ ಮಾಡಿದ್ದರು. ಕೊನೆಗೂ, ಏಳು ಮತಗಳ ಅಂತರದಿಂದ ಡಿವಿ ಸದಾನಂದ ಗೌಡ ಜಯಶಾಲಿಯಾಗಿದ್ದಾರೆ. ಡಿವಿ ಸದಾನಂದ ಗೌಡರ ಟ್ರೇಡ್ ಮಾರ್ಕ್ ನಗೆಯ ಜೊತೆಗೆ ಇನ್ನಾರು ತಿಂಗಳಲ್ಲಿ ಮತ್ತೆ ಅಧಿಕಾರಕ್ಕೆ ಬರುವೆ ಎಂದು ಹೇಳಿರುವ ಯಡಿಯೂರಪ್ಪನವರ ನಗೆಯೂ ಮರಳಿದೆ.












Click it and Unblock the Notifications