ಹೊಸ ಸಿಎಂ ಆಯ್ಕೆಇಂದು: ಯಡ್ಡಿ ಅಭ್ಯರ್ಥಿಗೆ ಅಡ್ವಾಣಿ ಅಡ್ಡಿ

ಇಂದು ಬೆಳಗ್ಗೆ 11 ಗಂಟೆಗೆ ರಾಜಭವನದ ಬಳಿಯಿರುವ ಹೋಟೆಲ್ ಕ್ಯಾಪಿಟಲ್ ನಲ್ಲಿ ಬಿಜೆಪಿ ಶಾಸಕಾಂಗ ಸಭೆ ಸೇರಲಿದ್ದು, ತನ್ನ ನೂತನ ನಾಯಕನನ್ನು ಆರಿಸಲಿದೆ.
'ಯಡಿಯೂರಪ್ಪ ಹಿಂಬದಿ ಸೀಟಿನ ಸವಾರರಾಗಲು ಹೊರಟಿದ್ದಾರೆ. ಅದಕ್ಕೆ ಅವಕಾಶ ಕೊಡಬೇಡಿ. ಈಗಾಗಲೇ ಅವರು ಪಕ್ಷಕ್ಕೆ ಮಾಡಿರುವ ಹಾನಿಯೇ ಸಾಕು. ಇದನ್ನು ಸದ್ಯಕ್ಕೆ ಸರಿಪಡಿಸಲಾಗದು. ಹೀಗಾಗಿ ಅವರ ಒತ್ತಡ ತಂತ್ರಗಳಿಗೆ ಮಣೆ ಹಾಕಬೇಡಿ' ಎಂದು ಅಡ್ವಾಣಿ ಸ್ಪಷ್ಟವಾಗಿ ಸೂಚಿಸಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.
'ನಾನು ಹಿಂದೆಯೇ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತೊಗೆಯಬೇಕು ಎಂದು ಹೇಳಿದ್ದೆ. ಆಗಲೇ ಇದನ್ನು ಮಾಡಿದ್ದರೆ ಪಕ್ಷಕ್ಕೆ ಇಷ್ಟೊಂದು ಹಾನಿ ಆಗುತ್ತಿರಲಿಲ್ಲ. ಸಾರ್ವಜನಿಕವಾಗಿ ನಾವು ತಲೆ ತಗ್ಗಿಸಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲ' ಎಂದು ಹಿರಿಯ ನುಡಿಗಳನ್ನು ಹೇಳಿದ್ದಾರೆ.
ಯಡಿಯೂರಪ್ಪ ರಾಜೀನಾಮೆ ಕೊಡದಿದ್ದರೆ ತಾನು ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಬರುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಬಿಜೆಪಿ ಸಂಸದೀಯ ಪಕ್ಷದ ನಾಯಕರೂ ಆಗಿರುವ ಅಡ್ವಾಣಿ, ಬೆಂಗಳೂರಿನಲ್ಲಿರುವ ಹಿರಿಯ ಮುಖಂಡರ ಜತೆ ಸತತ ಸಂಪರ್ಕದಲ್ಲಿದ್ದು, ಪ್ರತಿ ಕ್ಷಣದ ಬೆಳವಣಿಗೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
ಆದರೆ ... ಅಡ್ವಾಣಿ ಮಾತು ನಡೆಯುತ್ತದಾ!?: ಆದರೆ, 'ಅಡ್ವಾಣಿ ಮಾತು ಎಷ್ಟರಮಟ್ಟಿಗೆ ನಡೆಯುತ್ತದೆ ಎಂದು ಹೇಳುವುದು ಕಷ್ಟ. ಈಗ ಅವರಿಗೆ ಪಕ್ಷದ ಮೇಲೆ ಮುಂಚಿನ ಹಿಡಿತವಿಲ್ಲ. ಆದರೂ ಅವರ ಮಾತನ್ನು ಅಷ್ಟು ಸುಲಭವಾಗಿ ತಳ್ಳಿಹಾಕುವುದು ಕಷ್ಟ. ಒಂದು ವೇಳೆ ಅಡ್ವಾಣಿ ಮಾತು ನಡೆದರೆ ಯಡಿಯೂರಪ್ಪ ಹೇಳುವ ಮನುಷ್ಯ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಮೂಲಗಳು ವ್ಯಾಖ್ಯಾನಿಸಿವೆ.












Click it and Unblock the Notifications