ಬಿಜೆಪಿಯಲ್ಲಿ ಸರ್ಜರಿ ಬರ್ಜರಿ; 'ಸ್ವಯಂ ಆಪರೇಷನ್ ಕಮಲ' !

ಬಿಜೆಪಿಯಲ್ಲಿ ಈಗ ಸ್ಪಷ್ಟವಾಗಿ ಎರಡು ಬಣಗಳು ಸೃಷ್ಟಿಯಾಗಿವೆ. ನಿರ್ಗಮಿತ ಮುಖ್ಯಮಂತ್ರಿ ಯಡಿಯೂರಪ್ಪ ಬಣ ಹಾಗೂ ಸಂಸದ ಅನಂತ್ಕುಮಾರ್ ಬಣದ ನಡುವೆ ಅಧಿಕಾರಕ್ಕಾಗಿ ಪೈಪೋಟಿ ನಡೆದಿದ್ದು, ನಮ್ಮ ಬಣದವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಎರಡೂ ಕಡೆಯವರು ಪಟ್ಟು ಹಿಡಿದಿದ್ದಾರೆ.
ಯಡಿಯೂರಪ್ಪ ಬಣದಿಂದ ಸಂಸದ ಡಿ.ವಿ. ಸದಾನಂದ ಗೌಡ ಮತ್ತು ಅನಂತಕುಮಾರ್ ಬಣದಿಂದ ಜಗದೀಶ ಶೆಟ್ಟರ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂಬ ಪ್ರಯತ್ನ ನಡೆದಿದೆ. ಶಾಸಕರನ್ನು ತಮ್ಮತ್ತ ಸೆಳೆಯಲು ಕುದುರೆ ವ್ಯಾಪಾರ (ಶಾಸಕರ ಖರೀದಿ) ನಡೆದಿದ್ದು, ಹಲವು ಆಮಿಷಗಳನ್ನು ಒಡ್ಡಲಾಗುತ್ತಿದೆ ಎಂಬ ಮಾತುಗಳು ಪಕ್ಷದ ವಲಯದಲ್ಲೇ ಕೇಳಿಬಂದಿವೆ.
ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ, ಮುರುಗೇಶ ನಿರಾಣಿ, ಎಂ.ಪಿ.ರೇಣುಕಾಚಾರ್ಯ, ಶಾಸಕ ಸುರೇಶ್ಗೌಡ ಮೊದಲಾದವರು ಚಾನ್ಸೆರಿ ಹೋಟೆಲ್ನಿಂದಲೇ ತಮ್ಮ ವಿರೋಧಿ ಬಣದ ಶಾಸಕರನ್ನು ಸೆಳೆಯುವ ಪ್ರಯತ್ನದಲ್ಲಿ ತೊಡಗಿದ್ದರು. ಯೋಗಕ್ಷೇಮ ವಿಚಾರಿಸುವ ನೆಪದಲ್ಲಿ ವಿರೋಧಿ ಬಣದ ಶಾಸಕರಿಗೆ ಮೊಬೈಲ್ ಕರೆ ಮಾಡಿ, ಸದಾನಂದ ಗೌಡ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಸಹಕರಿಸಿ ಎಂದು ಮನವಿ ಮಾಡುತ್ತಿದ್ದರು ಎನ್ನಲಾಗಿದೆ.
ಎರಡೂ ಬಣದ ಶಾಸಕರು ಪ್ರತ್ಯೇಕ ಹೋಟೆಲ್ಗಳಲ್ಲಿ ತಂಗುವ ಮೂಲಕ ಅಲ್ಲಿಂದಲೇ ಕಾರ್ಯಚಟುವಟಿಕೆ ನಡೆಸಿದ್ದಾರೆ. ಅಶೋಕ ಮತ್ತು ಚಾನ್ಸರಿ ಹೋಟೆಲ್ಗಳು ರಾಜಕೀಯ ಚಟುವಟಿಕೆಗಳ ಕೇಂದ್ರಗಳಾಗಿದ್ದು, ಬುಧವಾರ ಬೆಳಿಗ್ಗೆ ಎಲ್ಲ ಶಾಸಕರು ಹೋಟೆಲ್ನಿಂದ ನೇರವಾಗಿ ಶಾಸಕಾಂಗ ಪಕ್ಷದ ಸಭೆಗೆ 11 ಗಂಟೆಗೆ ಬರಲಿದ್ದಾರೆ.












Click it and Unblock the Notifications