ವಿಭಜನೆಯ ಹಾದಿಯಲ್ಲಿ ಸಾಗುತ್ತಿದೆಯೆ ಬಿಜೆಪಿ?

"ಷರತ್ತುಗಳನ್ನು ಬಿಜೆಪಿ ಹೈಕಮಾಂಡ್ ಒಪ್ಪದಿದ್ದರೆ ನನ್ನ ದಾರಿ ನನಗೆ" ಎಂದು ಹೇಳಿರುವ ಯಡಿಯೂರಪ್ಪ ಬಿಜೆಪಿ ಪಾಳಯದಲ್ಲಿಯೇ ಅಸಮಾಧಾನದ ಕಿಡಿ ಏಳುವಂತೆ ಮಾಡಿದ್ದಾರೆ. ಬೆಂಕಿ ಹೊತ್ತಿಕೊಳ್ಳುವ ಮುನ್ನ ಆರಿಸಲೆಂದು ದೆಹಲಿಯಿಂದ ಅರುಣ್ ಜೇಟ್ಲಿ ಮತ್ತು ರಾಜನಾಥ್ ಸಿಂಗ್ ಬೆಂಗಳೂರಿಗೆ ಬಂದಿದ್ದಾರೆ.
ನಿನ್ನೆ ಸಂಜೆ ಬಿಜೆಪಿಯ ಶಾಸಕರೊಂದಿಗೆ ಮಾತುಕತೆ ನಡೆಸುವ ಮುನ್ನ ರಾಜೀನಾಮೆ ನೀಡುವ ಪರವಾಗಿಯೇ ಯಡಿಯೂರಪ್ಪ ಇದ್ದರು. ಇಂದು ಇದ್ದಕ್ಕಿದ್ದಂತೆ ಬಂಡಾಯದ ಬಾವುಟ ಹಾರಿಸಿದ್ದಾರೆ. ಶೋಭಾ ಕರಂದ್ಲಾಜೆ ಮುಂದಿನ ಮುಖ್ಯಮಂತ್ರಿ ಆಗಲೇಬೇಕು ಎಂದು ಪಟ್ಟುಹಿಡಿದಿದ್ದಾರೆ.
ನಿನ್ನೆ ಈಶ್ವರಪ್ಪ ನೀಡಿದ್ದ ಹೇಳಿಕೆಯನ್ನು ನೆನಪಿಸಿಕೊಳ್ಳಬಹುದು. "ಅಕ್ರಮ ಗಣಿಗಾರಿಕೆಯಲ್ಲಿ ಯಾರೇ ಭಾಗಿಯಾಗಿರಲಿ. ನ್ಯಾಯಕ್ಕೆ ತಲೆಬಾಗಿ ರಾಜೀನಾಮೆ ನೀಡಲೇಬೇಕು" ಎಂದಿದ್ದರು. ಅವರ ಮಾತಲ್ಲಿ, ಯಡಿಯೂರಪ್ಪ ಅವರು ತಪ್ಪು ಮಾಡಿದ್ದಾರೆ, ರಾಜೀನಾಮೆ ನೀಡದೆ ವಿಧಿಯಿಲ್ಲ ಎಂಬ ದನಿಯಿತ್ತು. ಆರ್ ಅಶೋಕ್ ಕೂಡ ಇದೇ ಮಾತು ಪ್ರತಿಧ್ವನಿಸಿದ್ದರು.
ಈಶ್ವರಪ್ಪ, ಆರ್ ಅಶೋಕ್, ಅನಂತ್ ಕುಮಾರ್, ಜಗದೀಶ್ ಶೆಟ್ಟರ್ ಮುಂತಾದ ಮೊದಲ ಸಾಲಿನ ನಾಯಕರು ಯಡಿಯೂರಪ್ಪನವರ ಹೊಸ ರಾಗವನ್ನು ಬೆಂಬಲಿಸುತ್ತಾರಾ? ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಇವರೆಲ್ಲ ಶೋಭಾ ಕರಂದ್ಲಾಜೆ ಮುಖ್ಯಮಂತ್ರಿಯಾಗುವುದನ್ನು ಒಪ್ಪುತ್ತಾರಾ?












Click it and Unblock the Notifications