ಶಿವಮೊಗ್ಗದ ನಾಲ್ಕು 'ಅಪೂರ್ಣ' ಸಿಎಂ ಕಲಿಗಳ ಪ್ರವರ !
ಕಡಿದಾಳ್ ಮಂಜಪ್ಪ: 1956ರ ಆಗಸ್ಟ್ 9ರಂದು ತೀರ್ಥಹಳ್ಳಿ ತಾಲೂಕಿನ ಕಡಿದಾಳು ಮಂಜಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಕೇವಲ 2 ತಿಂಗಳು ಮಾತ್ರ ಅಧಿಕಾರ ತ್ಯಾಗ ಮಾಡುವ ಅನಿವಾರ್ಯತೆಗೆ ಸಿಕ್ಕು ಬಿದ್ದು, 1956ರ ಆಕ್ಟೋಬರ್ 31ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಎಸ್. ಬಂಗಾರಪ್ಪ: ವೀರೇಂದ್ರ ಪಾಟೀಲರು ಅಂದು ಪ್ರಧಾನಮಂತ್ರಿಯಾಗಿದ್ದ ರಾಜೀವ್ ಗಾಂಧಿಯವರ ಆಕ್ರೋಶಕ್ಕೆ ಬಲಿಯಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಸೊರಬ ತಾಲೂಕಿನ ಎಸ್. ಬಂಗಾರಪ್ಪ ಮುಖ್ಯಮಂತ್ರಿ ಗಾದಿಯ ಅವಕಾಶ ಪಡೆದರು. 1990ರ ಅ. 17ರಂದು ಪ್ರಮಾಣ ವಚನ ಸ್ವೀಕರಿಸಿದರು. ಆದರೆ, ಎರಡು ವರ್ಷವಾಗುವುದರೊಳಗೆ ಆಗ ಪ್ರಧಾನಿಯಾಗಿದ್ದ ನರಸಿಂಹರಾವ್ ಮತ್ತು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಸೀತಾರಾಮ ಕೇಸರಿಯವರಿಗೆ ಬಂಗಾರಪ್ಪ ಸರಿ ಬರಲಿಲ್ಲ. ಹೀಗಾಗಿ 1992ರ ನವೆಂಬರ್ 19ರಂದು ಬಂಗಾರಪ್ಪ ಅಧಿಕಾರದಿಂದ ಕೆಳಗಿಳಿದರು.
ಜೆ. ಹೆಚ್. ಪಟೇಲ್: 1996ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಹೆಚ್. ಡಿ. ದೇವೇಗೌಡಗೆ ಅನಿರೀಕ್ಷಿತವಾಗಿ ಪ್ರಧಾನಮಂತ್ರಿ ಹುದ್ದೆ ಒಲಿದು ಬಂದಿತ್ತು. ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಂದು ಶಿವಮೊಗ್ಗ ಜಿಲ್ಲೆಗೆ ಸೇರಿದ್ದ ಚನ್ನಗಿರಿ ತಾಲೂಕಿನ ಜೆ. ಹೆಚ್. ಪಟೇಲರು, 1996ರ ಮೇ 31ರಂದು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ನಂತರ ನಡೆದ ಜನತಾ ಪರಿವಾರದ ಒಳಜಗಳದ ಪರಿಣಾಮ 1999ರ ಅ. 7ರಂದು ರಾಜೀನಾಮೆ ನೀಡಿದರು.
ಬಿ.ಎಸ್.ಯಡಿಯೂರಪ್ಪ: 2006ರಲ್ಲಿ ಬಿಜೆಪಿ -ಜೆಡಿಎಸ್ ಸಮ್ಮಿಶ್ರ ಸರ್ಕಾರ ಕಾಲದಲ್ಲಿ, ಜಿಲ್ಲೆಯ ಶಿಕಾರಿಪುರ ತಾಲೂಕಿನ ಬಿ.ಎಸ್.ಯಡಿಯೂರಪ್ಪ ಕೇವಲ ಎರಡು ದಿನ ಸಿಎಂ ಆಗಿದ್ದರು. ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡುವುದರೊಂದಿಗೆ ಸ್ವತಂತ್ರವಾಗಿ ಅಧಿಕಾರ ಪಡೆಯಿತಾದರೂ ಎರಡು ತಿಂಗಳಿಗೊಮ್ಮೆ ಭಿನ್ನಮತ ಕಾಡುತ್ತಲೇ ಇತ್ತು. 2007ರ ನ.12ರಂದು ಮತ್ತೆ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದರು. ಮೂರು ವರ್ಷದಲ್ಲಿ ಅವರ ಸ್ಥಾನಕ್ಕೆ ಸಂಚಕಾರ ಬಂದಿದೆ.