ಜನಾ ರೆಡ್ಡಿ ತೊಡೆ ತಟ್ಟಿದ್ದೇ ಎಲ್ಲದಕ್ಕೂ ಕಾರಣವಾಯಿತು!

ಅಂದು ವಿಧಾನ ಪರಿಷತ್ ಸದಸ್ಯರಾಗಿದ್ದ ಜಿ. ಜನಾರ್ದನ ರೆಡ್ಡಿ ಆಗಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ತೊಡೆತಟ್ಟಿದ್ದೇ ತಡ, ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತ ತನಿಖೆಗೆ ಆದೇಶ ಹೊರಬಿತ್ತು. ಅದೇ ತನಿಖಾ ವರದಿ ಈಗ ಸ್ವತಃ ಅವರಿಗಷ್ಟೇ ಅಲ್ಲ, ಮುಖ್ಯಮಂತ್ರಿಯ ಯಡಿಯೂರಪ್ಪ ಅವರಿಗೂ ಮುಳುಗುನೀರು ತಂದಿತು.
2006ರಲ್ಲಿ ಏನಾಯಿತೆಂದರೆ ... ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿತ್ತು. ಆಗಸ್ಟ್ ತಿಂಗಳಲ್ಲಿ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಅವರು 'ಬಳ್ಳಾರಿಯ ಗಣಿ ಮಾಲೀಕರಿಂದ ಕುಮಾರಸ್ವಾಮಿ 150 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ' ಎಂದು ಸದನದಲ್ಲೇ ನೇರ ಆರೋಪ ಮಾಡಿದ್ದರು.
ಅಲ್ಲಿಂದ ಆರಂಭವಾದ ಕುಮಾರಸ್ವಾಮಿ v/s ಜನಾ ರೆಡ್ಡಿ ನಡುವೆ ಬಹಿರಂಗ ಕದನ ಮುಂದುವರಿಯಿತು. ಈ ಹಿನ್ನೆಲೆಯಲ್ಲಿ 2000ನೇ ವರ್ಷದ ಜನವರಿ 1ರಿಂದ 2006ರ ಆಗಸ್ಟ್ವರೆಗಿನ ಅವಧಿಯಲ್ಲಿನ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಲು ನ್ಯಾಯಮೂರ್ತಿ ಯು.ಎಲ್. ಭಟ್ ನೇತೃತ್ವದ ಆಯೋಗವನ್ನು ನೇಮಕ ಮಾಡಲಾಗಿತ್ತು. ಆದರೆ ಆಯೋಗದ ತನಿಖೆಯಲ್ಲಿ ಹೆಚ್ಚೇನೂ ಪ್ರಗತಿ ಆಗಿರಲಿಲ್ಲ.
ಲೋಕಾಯುಕ್ತಕ್ಕೆ ವರ್ಗ: ಕುಮಾರಸ್ವಾಮಿ-ರೆಡ್ಡಿ ನಡುವಣ ಕದನ ಪ್ರತಿಪಕ್ಷ ಕಾಂಗ್ರೆಸ್ ಪಾಲಿಗೆ ಪ್ರಮುಖ ಅಸ್ತ್ರವಾಯಿತು. ಪರಿಣಾಮವಾಗಿ 2007ರ ಮಾರ್ಚ್ 12ರಂದು ಆದೇಶವೊಂದನ್ನು ಹೊರಡಿಸಿದ ಕುಮಾರಸ್ವಾಮಿ, 2000ನೇ ವರ್ಷದ ಜನವರಿ 1ರಿಂದ 2006ರ ಜುಲೈ 22ರವರೆಗೆ ರಾಜ್ಯದಲ್ಲಿ ನಡೆದಿರುವ ಎಲ್ಲ ಅಕ್ರಮ ಗಣಿಗಾರಿಕೆ ಪ್ರಕರಣಗಳ ತನಿಖೆಯನ್ನು ಲೋಕಾಯುಕ್ತಕ್ಕೆ ಒಪ್ಪಿಸಿದ್ದರು.
ಐಎಫ್ಎಸ್ ಅಧಿಕಾರಿ ಡಾ.ಯು.ವಿ. ಸಿಂಗ್ ಸೇರಿದಂತೆ ಅನುಭವಿಗಳ ತಂಡವೊಂದನ್ನು ಕಟ್ಟಿದ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, ಅಕ್ರಮ ಗಣಿಗಾರಿಕೆ ಕುರಿತ ತನಿಖೆಗೆ ಅವರನ್ನು ನಿಯೋಜಿಸಿದ್ದರು. ಈ ಮಧ್ಯೆಯೇ 2008ರ ಸೆಪ್ಟೆಂಬರ್ 9ರಂದು ಆದೇಶವೊಂದನ್ನು ಹೊರಡಿಸಿದ ಸರ್ಕಾರ ತನಿಖೆಯ ಅವಧಿಯನ್ನು ವಿಸ್ತರಿಸಿತು.












Click it and Unblock the Notifications