ಯಡಿಯೂರಪ್ಪ ರಾಜೀನಾಮೆ ಪಡೆಯಲು ಗಡ್ಕರಿಗೆ ಅಡ್ವಾಣಿ ಸೂಚನೆ
ಬುಧವಾರ ರಾತ್ರಿ 11 ಗಂಟೆಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಯಡಿಯೂರಪ್ಪ 'ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ, ಶಾಸಕರು, ಸಂಸದರು ಎಲ್ಲರೂ ನನ್ನ ಜೊತೆಗಿದ್ದಾರೆ' ಎಂದು ಹೇಳುವ ಮೂಲಕ ವರಿಷ್ಠರಿಗೆ ಸವಾಲೆಸೆದಿದ್ದಾರೆ.
11.15ರ ಸುಮಾರಿಗೆ ಗಡ್ಕರಿ ಅವರ ಮನೆಯಲ್ಲಿ ಆರಂಭವಾದ ಸಭೆಯಲ್ಲಿದ್ದ ಕೇಂದ್ರದ ಎಲ್ಲ ನಾಯಕರೂ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಮೇಲೆ ಒತ್ತಡ ಹಾಕಿದರು. ಇದರಿಂದ ಮಾನಸಿಕವಾಗಿ ಜರ್ಝರಿತರಾದ ಮುಖ್ಯಮಂತ್ರಿ ಮಾತುಕತೆ ನಡುವೆಯೇ ಎದ್ದು ಹೊರಬಂದು, ಏನು ಮಾಡಬೇಕೆಂದು ಚಿಂತಿಸುತ್ತಾ ಮನೆಯ ಆವರಣದೊಳಗೆ ಅತ್ತಿಂದಿತ್ತ ಕೆಲ ಕಾಲ ಓಡಾಡಿದರು. ಸಭೆಯ ಮಧ್ಯೆಯೇ ಊಟದ ಶಾಸ್ತ್ರವನ್ನು ನೆಪಮಾತ್ರಕ್ಕೆ ಮುಗಿಸಿದರು.
ಅನಂತರ ಮಾತುಕತೆ ಮುಂದುವರಿದು, ಮನವೊಲಿಕೆ ಯತ್ನ ರಾತ್ರಿ 2 ಗಂಟೆ ನಂತರವೂ ನಡೆದಿತ್ತು. ಹೈಕಮಾಂಡ್ ಪರವಾಗಿ ವೆಂಕಯ್ಯ ನಾಯ್ಡು, ರಾಮ್ಲಾಲ್, ಅರುಣ್ ಜೇಟ್ಲಿ ಹಾಗೂ ರಾಜ್ಯದ ಮುಖಂಡರಾದ ಕೆ.ಎಸ್.ಈಶ್ವರಪ್ಪ, ಡಿ.ವಿ.ಸದಾನಂದ ಗೌಡ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಲೋಕಾಯುಕ್ತ ವರದಿಗೆ ಸಂಬಂಧಿಸಿದ ಕಾನೂನು ಸಾಧಕ ಬಾಧಕಗಳನ್ನು ಅಡ್ವೊಕೇಟ್ ಜನರಲ್ ಅಶೋಕ ಹಾರ್ನಹಳ್ಳಿ ಸಭೆಗೆ ವಿವರಿಸಿದರು.