ಮುಳುಗುತ್ತಿರುವ ಯಡಿಯೂರಪ್ಪಗೆ ಸಿಕ್ಕ ಹುಲ್ಲುಕಡ್ಡಿ ಆಸರೆ

"ಪ್ರಧಾನಿ ಅವರ ಸಂಪುಟದಲ್ಲಿಯೂ ಸಾಕಷ್ಟು ಭ್ರಷ್ಟಾಚಾರಿಗಳಿದ್ದಾರೆ. ಅವರಿಗೆ ರಾಜೀನಾಮೆ ನೀಡಲು ಮೊದಲು ತಾಕೀತು ಮಾಡಲಿ, ನಂತರ ನಮ್ಮ ಬಗ್ಗೆ ಮಾತನಾಡಲಿ. ನಾನು ಮುಂದಿನ 2 ವರ್ಷ ಮುಖ್ಯಮಂತ್ರಿಯಾಗಿಯೇ ಮುಂದುವರಿಯುತ್ತೇನೆ. ಕರ್ನಾಟಕದಲ್ಲಿ ಬಿಜೆಪಿ 20 ವರ್ಷ ಆಡಳಿತದಲ್ಲಿ ಇರುತ್ತದೆ" ಎಂದು ಹೇಳಿ ಕುರ್ಚಿ ಬಿಡಬೇಕೆಂದು ಎದ್ದಿರುವ ಕೂಗಿಗೆ ಪ್ರತಿಯಾಗಿ ತಮ್ಮ ನಿಲುವೇನೆಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಯಡಿಯೂರಪ್ಪನವರ ಮಾತಿನ ಮರ್ಮವೇನು? ರಾಜಕೀಯದಲ್ಲಿ ಎಲ್ಲರೂ ಭ್ರಷ್ಟರಾಗಿದ್ದಾರೆ. ಮೊದಲು ಮೇಲಿನವರು ಕೆಳಗಿಳಿಯಲಿ, ನಂತರ ನಾನು ಇಳಿಯುತ್ತೇನೆ ಎಂದು ಹೇಳಿದಂತಾಗಲಿಲ್ಲವೆ? ತಾವು ಕೂಡ ಭ್ರಷ್ಟರೆಂದು ಪರೋಕ್ಷವಾಗಿ ಯಡಿಯೂರಪ್ಪ ಒಪ್ಪಿಕೊಂಡಂತಾಗಲಿಲ್ಲವೆ? ಭ್ರಷ್ಟಾಚಾರದ ಗುಡುಗು ಸಿಡಿಲು ಬೀಳಲಿ, ವಿರೋಧದ ಮಳೆಯೇ ಸುರಿಯಲಿ ನಾನು ಮಾತ್ರ ಅಚಲ ಎಂಬ ಮಾತನ್ನು ಮತ್ತೆ ಒತ್ತಿ ಹೇಳಿದ್ದಾರೆ.
ಡಿನೋಟಿಫಿಕೇಷನ್ ಹಗರಣದಲ್ಲಿ ಭಾಗಿಯಾದ ಮಾತು ಕೇಳಿಬಂದಾಗಲೂ ಇದೇ ರೀತಿಯ ವಾದವನ್ನು ಯಡಿಯೂರಪ್ಪ ಮಂಡಿಸಿದ್ದರು. ನಾನಷ್ಟೇ ಏಕೆ ಹತ್ತು ವರ್ಷಗಳಿಂದ ಯಾರ್ಯಾರು ಗದ್ದುಗೆಯಲ್ಲಿ ಕುಳಿತಿದ್ದಾರೋ ಅವರೆಲ್ಲರೂ ಡಿನೋಟಿಫಿಕೇಷನ್ ಹಗರಣದಲ್ಲಿ ಭಾಗಿಯಾಗಿದ್ದಾರೆ. ಎಸ್ಎಂ ಕೃಷ್ಣ, ಧರಂ ಸಿಂಗ್, ಕುಮಾರಸ್ವಾಮಿ ಎಲ್ಲರ ಆಡಳಿತದಲ್ಲಿ ನಡೆದ ಹಗರಣಗಳ ತನಿಖೆಯಾಗಲಿ ಎಂದು ಪಟ್ಟುಹಿಡಿದಿದ್ದರು.
ಆಗಸ್ಟ್ 2ರಂದು ನಿವೃತ್ತಿಯಾಗಲಿರುವ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆಯವರು ಬುಧವಾರ ಸರಕಾರಕ್ಕೆ ಅಕ್ರಮ ಗಣಿಗಾರಿಕೆಯ ಅಂತಿಮ ವರದಿಯನ್ನು ಸಲ್ಲಿಸಲಿದ್ದಾರೆ. ಎಲ್ಲರ ಕಣ್ಣು ಸದ್ಯಕ್ಕೆ ಅದರ ಮೇಲೆ. ಹೆಗ್ಡೆಯವರ ಸ್ಥಾನದಲ್ಲಿ ನ್ಯಾ. ಶಿವರಾಜ್ ಪಾಟೀಲ ಅವರನ್ನು ತಂದು ಕೂಡಿಸಿರುವ ಯಡಿಯೂರಪ್ಪ ಗಣಿಗಾರಿಕೆ ವರದಿಯನ್ನು ಮಾನ್ಯ ಮಾಡುತ್ತಾರಾ? ಗಣಿಗಾಗಿ ತೆರೆದಿರುವ ಗುಣಿಯಲ್ಲಿ ಹೂತುಬಿಡುತ್ತಾರಾ?












Click it and Unblock the Notifications