ಅಕ್ರಮ ಗಣಿಗಾರಿಕೆ ವರದಿ ಸಲ್ಲಿಕೆ, ಮುಂದೇನು?

3 ಸೂಟ್ ಕೇಸುಗಳಲ್ಲಿ ಭದ್ರವಾಗಿದ್ದ ವರದಿಯನ್ನು ಲೋಕಾಯುಕ್ತ ರಿಜಿಸ್ಟ್ರಾರ್ ಮೂಸಾ ಕುನ್ಹಿ ನಾಯರ್ ಮೂಲೆ ಅವರು ಸರಕಾರದ ಸುಪರ್ದಿಗೆ ಒಪ್ಪಿಸಿದ್ದಾರೆ. ರಂಗನಾಥ್ ಕೈಗೆ ವರದಿ ಬರುತ್ತಿದ್ದಂತೆ ರಾಜಕಾರಣಿಗಳ ಹೊಟ್ಟೆಯಲ್ಲಿ ಪಾತರಗಿತ್ತಿ ಹಾರಾಡುತ್ತಿದ್ದಂತೆ ಅನುಭವವಾದಲ್ಲಿ ಆಶ್ಚರ್ಯವಿಲ್ಲ.
ಕರ್ನಾಟಕದ ರಾಜಕೀಯ ಚಿತ್ರಣವನ್ನೇ ಬದಲಾಯಿಸುವ ತಾಕತ್ತು ಹೊಂದಿರುವ ವರದಿಯನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೂ ಸಲ್ಲಿಸಲಾಗಿದೆ ಎಂಬ ವರದಿ ಬಂದಿದೆ. ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಪ್ರಕಾರ, ಮುಖ್ಯಮಂತ್ರಿಯ ವಿರುದ್ಧ ಕ್ರಮ ಜರುಗಿಸುವ ಅಧಿಕಾರ ರಾಜ್ಯಪಾಲರಿಗಿದೆ.
ಸೋರಿಕೆಯಾಗಿರುವ ವರದಿಯ ಪ್ರಕಾರ, ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ, ವಿ ಸೋಮಣ್ಣ, ಶ್ರೀರಾಮುಲು ಮತ್ತು ಅನಿಲ್ ಲಾಡ್ ಅವರ ಹೆಸರು ಪ್ರಮುಖವಾಗಿ ಪ್ರಸ್ತಾಪವಾಗಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ 16085 ಕೋಟಿ ರು. ನಷ್ಟವಾಗಿದೆ.
ಈಗಾಗಲೆ ಮುಖ್ಯಮಂತ್ರಿ ಯಡಿಯೂರಪ್ಪನವರ ತಲೆಯ ಮೇಲೆ ತೂಗುಗತ್ತಿ ತೂರಾಡುತ್ತಿದೆ. ಖಚಿತವಾಗಿ ಬಂದಿರುವ ಮಾಹಿತಿಯ ಪ್ರಕಾರ, ಯಡಿಯೂರಪ್ಪನವರನ್ನು ಗದ್ದುಗೆಯಿಂದ ಕೆಳಗಿಳಿಸಲು ಬಿಜೆಪಿ ಹೈಕಮಾಂಡ್ ಮಂಗಳವಾರವೇ ನಿರ್ಧರಿಸಿದೆ. ಈ ಸಂದೇಶವನ್ನು ಯಡಿಯೂರಪ್ಪನವರಿಗೂ ರವಾನಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ಅಧಿಕಾರದಿಂದ ಕೆಳಗಿಳಿಯಲು ಹಿಂದೇಟು ಹಾಕುತ್ತಿರುವ ಯಡಿಯೂರಪ್ಪ ಬಲಪ್ರದರ್ಶನಕ್ಕೆ ಮುಂದಾಗಿದ್ದು, ಆಪ್ತರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಸಂಜೆ 5 ಗಂಟೆಗೆ ದೆಹಲಿಗೆ ತೆರಳಲಿದ್ದಾರೆ. ಅಲ್ಲಿ ಅವರ ಹಣೆಬರಹ ನಿರ್ಧಾರವಾಗಲಿದೆ. ಮುಖ್ಯಮಂತ್ರಿ ಪಟ್ಟ ಆಕಾಂಕ್ಷಿಗಳಾದ ಪ್ರಮುಖರು ಯಡಿಯರಪ್ಪನವರಿಗೆ ಈ ಬಾರಿ ಕೈಕೊಡುವುದು ಖಚಿತ ಎಂಬ ಮಾಹಿತಿಯೂ ಬಂದಿದೆ.
ಯಡಿಯೂರಪ್ಪನವರ ಮುಂದಿನ ನಡೆಯೇನು? ಸದ್ಯಕ್ಕೆ ರಾಜ್ಯದ ಪ್ರತಿಯೊಬ್ಬರ ಊಹೆಗೂ ನಿಲುಕಲಾರದ ಪ್ರಶ್ನೆ. ಹೈಕಮಾಂಡ್ ಆಜ್ಞೆಯನ್ನು ಪುರಸ್ಕರಿಸುತ್ತಾರಾ? ಧಿಕ್ಕರಿಸುತ್ತಾರಾ? ರಾಜ್ಯವನ್ನು ಮತ್ತೊಂದು ಮಧ್ಯಂತರ ಚುನಾವಣೆಗೆ ನೂಕುತ್ತಾರಾ? [ಅಕ್ರಮ ಗಣಿಗಾರಿಕೆ ಸ್ಫೋಟ : ಕ್ಷಣಕ್ಷಣದ ಸುದ್ದಿ]












Click it and Unblock the Notifications