ಬೀಟೆ ಮರ ಕದ್ದ ಪೊಲೀಸ್ ಪೇದೆ ಸಿಕ್ಕಿ ಬಿದ್ದ
ಈತನ ತಂದೆ ದಿವಂಗತ ಮೇಚನ ಮೇದಪ್ಪ ಎಂಬುವರು ಅರಣ್ಯ ಇಲಾಖೆಯಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ತೀರಿಕೊಂಡ ಬಳಿಕ ಸತೀಶ ಕೆಲವು ಸಮಯಗಳ ಕಾಲ ಹಂಗಾಮಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದನಾದರೂ ಆ ನಂತರ ಕೆಎಸ್ಆರ್ಪಿಯಲ್ಲಿ ಪೇದೆಯಾಗಿ ನೇಮಕಗೊಂಡಿದ್ದನು. ಮೊದಲಿನಿಂದಲೂ ಮರಕಳ್ಳತನವನ್ನು ಕರಗತ ಮಾಡಿಕೊಂಡಿದ್ದ ಸತೀಶ ಪೊಲೀಸ್ ಪೇದೆಯಾಗಿ ಉದ್ಯೋಗಕ್ಕೆ ಸೇರಿದ ಬಳಿಕವೂ ಅದನ್ನು ಮುಂದುವರೆಸಿದ್ದನು.
ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈತ ರಜೆಯಲ್ಲಿ ಊರಿಗೆ ಹೋದಾಗ ಬೀಟೆ ಮರಗಳನ್ನು ಸಾಗಿಸುತ್ತಿದ್ದನು. ಕೆಲವರು ಕೇಳಿದರೆ ನಾನು ಪೊಲೀಸ್ ಎಂದು ಹೇಳಿಕೊಳ್ಳುತ್ತಿದ್ದುದರಿಂದ ಯಾರು ಕೂಡ ಈತನ ವಾಹನವನ್ನು ತಪಾಸಣೆ ಮಾಡದೆ ಬಿಟ್ಟು ಬಿಡುತ್ತಿದ್ದರು. ಹೀಗಾಗಿ ತನ್ನ ದಂಧೆಯನ್ನು ಮುಂದುವರೆಸಿದ್ದನು. ಕಳೆದ ವರ್ಷದವರೆಗೆ ಮೈಸೂರಿನಲ್ಲಿದ್ದ ಈತ ಕೆಲವೇ ತಿಂಗಳ ಹಿಂದೆ ಮಂಗಳೂರಿನ 7ನೇ ಬೆಟಾಲಿಯನ್ಗೆ ವರ್ಗಾವಣೆಗೊಂಡಿದ್ದನು.
ಈ ಬಾರಿ ರಜೆಯಲ್ಲಿ ಬಂದಾಗ ತನ್ನ ಮಾರುತಿ ವ್ಯಾನ್ನಲ್ಲಿ ಮಡಿಕೇರಿ ಬಳಿಯ ಬೋಯಿಕೇರಿಯ ತೋಟವೊಂದರಿಂದ ಸುಮಾರು 2.80 ಲಕ್ಷ ರು. ಮೌಲ್ಯದ ಬೀಟೆ ಮರಗಳನ್ನು ತುಂಬಿಸಿಕೊಂಡು ಬರುತ್ತಿದ್ದ ಸಂದರ್ಭ ಖಚಿತ ಸುಳಿವಿನ ಮೇರೆಗೆ ಡಿವೈಎಸ್ಪಿ ಜಯಪ್ರಕಾಶ್ ಮಾರ್ಗದರ್ಶನದಲ್ಲಿ ಬಂಧಿಸಲಾಗಿದೆ.
ಕುಶಾಲನಗರ ಸಿಐ ಪಿ.ಬಸವರಾಜು ನೇತೃತ್ವದಲ್ಲಿ ಸಬ್ ಇನ್ಸ್ಪೆಕ್ಟರ್ ಚಿಕ್ಕರಾಜುಶೆಟ್ಟಿ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ವ್ಯಾನ್ ಸೇರಿದಂತೆ ಬೀಟೆ ಮರವನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ಮುಂದುವರೆದಿದ್ದು ಈತ ಇನ್ನು ಹಲವೆಡೆ ಕಳ್ಳತನ ನಡೆಸಿರುವ ಬಗ್ಗೆಯೂ ತಿಳಿದು ಬಂದಿದೆ.