ಶೋಭಾ ಕರಂದ್ಲಾಜೆ ಪಟ್ಟಾಭಿಷೇಕಕ್ಕೆ ಯಡಿಯೂರಪ್ಪ ರೆಡಿ
ಯಡಿಯೂರಪ್ಪ ತಮ್ಮ ಈ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದೇ ಆದರೆ ಇಂಧನ ಸಚಿವೆ ಶೋಭಾ ಅವರು ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಹೊರಹೊಮ್ಮಲಿದ್ದಾರೆ.
ಈ ನಿಟ್ಟಿನಲ್ಲಿ ಯಡಿಯೂರಪ್ಪ ಅವರ 'ಶೋಭಾ ಪಟ್ಟಾಭಿಷೇಕ' ನಡೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಧಿಕಾರವನ್ನು ತಮ್ಮ ನೆಚ್ಚಿನ ಶಿಷ್ಯೆಗೆ ಹಸ್ತಾಂತರಿಸುವ ಮೂಲಕ ಸರಕಾರ ಮತ್ತು ಪಕ್ಷದ ಮೇಲಿನ ಹಿಡಿತವನ್ನು ತಮ್ಮ ಮುಷ್ಟಿಯಲ್ಲೇ ಇಟ್ಟುಕೊಳ್ಳುವುದು ಯಡಿಯೂರಪ್ಪ ಅವರ ಇರಾದೆಯಾಗಿದೆ ಎಂದು ನಮ್ಮ ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.
ಈ ಮಧ್ಯೆ, ಪಕ್ಷದ ಆಂತರಿಕ ವಲಯದಲ್ಲಿ ಯಡಿಯೂರಪ್ಪ ಅವರ ಈ ನಡಾವಳಿ ಈಗಾಗಲೇ ಅನೇಕ ನಾಯಕರಿಗೆ ಇರುಸುಮುರುಸು ತಂದಿದೆ. ಅರ್ಹ ನಾಯಕರು ಪಕ್ಷದಲ್ಲಿ ಇಲ್ಲವೇ? ಎಂದು ಯಡಿಯೂರಪ್ಪ ವಿರೋಧಿಗಳು ಕೆಂಡಕಾರತೊಡಗಿದ್ದಾರೆ. ಆದರೆ ಯಡಿಯೂರಪ್ಪ ಶೋಭಾಗಾಗಿಯೇ ಬಿಗಿಪಟ್ಟು ಹಿಡಿದಿದ್ದಾರೆ. ಇದೇ ವೇಳೆ ಯಡಿಯೂರಪ್ಪ ಕಪಿಮುಷ್ಠಿ ದೆಹಲಿ ಹೈಕಮಾಂಡ್ ವರೆಗೂ ಬಲಿಷ್ಠವಾಗಿ ತಲುಪಬಲ್ಲದು ಎಂಬುವುದನ್ನು ತಿಳಿದ ಮಂದಿ ಸುಮ್ಮನಾಗಿದ್ದಾರೆ.
ಯಾರೀಕೆ ಶೋಭಾ ಕರಂದ್ಲಾಜೆ?: ಈ ಸಂದರ್ಭದಲ್ಲಿ ಯಾರೀಕೆ ಶೋಭಾ ಎಂಬ ಪ್ರಶ್ನೆ ಸಹಜವಾಗಿ ಉದ್ಭವವಾಗುತ್ತಿದೆ. ಶೋಭಾ ಹಿನ್ನೆಲೆಯನ್ನು ಕೆದಕಿದಾಗ...ಶೋಭಾ ಜನನ 23 ಅಕ್ಟೋಬರ್ 1966. ದಕ್ಷಿಣ ಕನ್ನಡದ ಪ್ರತಿಭೆ. ಪಕ್ಷಕ್ಕೆ ಸೇರ್ಪಡೆಯಾಗಿದ್ದು 1994ರಲ್ಲಿ. 1999ಲ್ಲಿ ಬಿ. ಎಸ್. ಯಡಿಯೂರಪ್ಪ ಸಂಗದಲ್ಲಿ ಪಕ್ಷದಲ್ಲಿ ಹೆಚ್ಚು ಕ್ರಿಯಾಶೀಲ. 2000ರಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ.
ಮೇಲ್ಮನೆಗೆ 2004ರಲ್ಲಿ ನಾಮಕರಣ. ಬೆಂಗಳೂರು ಯಶವಂತಪುರ ವಿಧಾನಸಭೆ ಕ್ಷೇತ್ರದ ಶಾಸಕಿ. 2008ರಲ್ಲಿ ಗ್ರಾಮೀಣಾಭಿವೃದ್ಧಿ ಸಚಿವೆಯಾಗಿ ಅಧಿಕಾರಕ್ಕೆ. 2009ರ ಅಕ್ಟೋಬರಿನಲ್ಲಿ ಪ್ರತಿಕೂಲ ರಾಜಕೀಯ ವಿದ್ಯಮಾನಗಳಿಂದಾಗಿ ಸಚಿವೆ ಸ್ಥಾನಕ್ಕೆ ಚ್ಯುತಿ, ಕೃಪೆ: ಬಳ್ಳಾರಿ ರೆಡ್ಡಿ ಸೋದರರು. ಶೋಭಾ ಸಚಿವ ಸ್ಥಾನಕ್ಕೆ ಕುತ್ತು ಬಂದಾಗ ದೆಹಲಿಯಲ್ಲಿ ಟಿವಿ9 ಕ್ಯಾಮರಾ ಮುಂದೆ ಗಳಗಳನೆ ಅತ್ತ ಯಡಿಯೂರಪ್ಪ. 2010ರಲ್ಲಿ ಮತ್ತೆ ಸಂಪುಟ ಸೇರಿಕೊಂಡ ಶೋಭಾ ಅವರ ವೆಬ್ಸೈಟ್ ವಿಳಾಸ- http://shobhakarandlaje.com/