ಹಾಸನ, ಕರಾವಳಿಗೆ ಚುರುಕು ಮುಟ್ಟಿಸಿದ ಮುಂಗಾರು
ಕರಾವಳಿಯ ಅನೇಕ ಭಾಗಗಳಲ್ಲಿ ಶನಿವಾರ ಬಿದ್ದ ಭರ್ಜರಿ ಮಳೆಗೆ ಜನತೆ ಬೆಚ್ಚಿದ್ದಾರೆ. ಹಲವು ಭಾಗಗಳಲ್ಲಿ ಆಸ್ತಿ ಪಾಸ್ತಿ ಹಾನಿಯಾಗಿರುವ ಸುದ್ದಿ ಕೂಡಾ ಬಂದಿದೆ. ಅಂಕೋಲಾ ತಾಲೂಕಿನ ಕೇಣಿ ಗ್ರಾಮ ಸಂಪೂರ್ಣ ಜಲಾವೃತವಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ನೆರೆ ಭೀತಿ ಎದುರಾಗಿದೆ.
ಹಾಸನ, ಸಕಲೇಶಪುರ, ಬೇಲೂರು, ಆಲೂರು, ಚನ್ನರಾಯಪಟ್ಟಣ, ಅರಕಲಗೂಡು ಮುಂತಾದೆಡೆ ಎಡೆಬಿಡರೆ ಸುರಿದ ಮಳೆಯಿಂದ ಜನತೆ ಕಂಗಾಲಾಗಿದ್ದಾರೆ. ಸಕಲೇಶಪುರ ಮಂಗಳೂರು ಮಾರ್ಗದಲ್ಲಿ ರೈಲ್ವೇ ಹಳಿ ಮೇಲೆ ಬಂಡೆ ಬಿದ್ದ ಪರಿಣಾಮ ಈ ಭಾಗದ ರೈಲು ಸಂಚಾರ ಸ್ಥಗಿತಗೊಂಡಿದೆ. ಹಾಸನ ಜಿಲ್ಲೆಯ ಹೇಮಾವತಿ ಹಾಗೂ ಯಗಚಿ ಜಲಾಶಯ, ಕೆರೆ ಕಟ್ಟೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ರೈತರು ಮಳೆಯನ್ನೂ ಲೆಕ್ಕಿಸದೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.
ಬೆಂಗಳೂರಲ್ಲೂ ಮಳೆ ಹಾವಳಿ: ರಾಜಧಾನಿಯಲ್ಲೂ ವೀಕೆಂಡ್ ಮಜಾವನ್ನು ಹಾಳುಗೆಡವುವಲ್ಲಿ ಮಳೆ ಯಶಸ್ವಿಯಾಗಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಶನಿವಾರ ಸಂಜೆ ಮಳೆಯಿಂದ ಸಕತ್ ಕಿರಿಕಿರಿ ಉಂಟಾಗಿದೆ. ದಕ್ಷಿಣ ಬೆಂಗಳೂರು, ಶೇಷಾದ್ರಿಪುರ,ರಾಜಾಜಿನಗರ ಸೇರಿದಂತೆ ಹಲವೆಡೆ ಜನಜೀವನಕ್ಕೆ ಮಳೆ ಅಡ್ಡಿಯಾಗಿತ್ತು. ನಾಳೆ ಕೂಡಾ ಮೋಡ ತುಂಬಿದ ವಾತಾವರಣ ಮುಂದುವರೆಯಲಿದ್ದು, ಭಾಗಶಃ ಮಳೆ ಸಾಧ್ಯತೆಯಿದೆ.