ಶ್ರೀರಂಗಪಟ್ಟಣ ಬನ್ನಿ ಮಂಟಪದ ಸುತ್ತ ವಿವಾದ ಹುತ್ತ

ಈ ಜಾಗ 50 ವರ್ಷದಿಂದ ಪಾಳು ಬಿದ್ದಿತ್ತು. ಬನ್ನಿ ಮಂಟಪದ ಎರಡು ಗುಂಟೆ ಖರಾಬು ಜಾಗದ ಸುತ್ತ ಇದ್ದ ಈ ಭೂಮಿಯನ್ನು ವಶಕ್ಕೆ ಪಡೆದು ಉದ್ಯಾನ ಅಭಿವೃದ್ಧಿಪಡಿಸಲು ತಾಲ್ಲೂಕು ಆಡಳಿತ ನಿರ್ಧರಿಸಿತ್ತು.
ಉಪವಿಭಾಗಾಧಿಕಾರಿ ಜಿ.ಪ್ರಭು ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯೂ ಇದಕ್ಕೆ ಅನುಮೋದನೆ ನೀಡಿತ್ತು. ಆದರೆ, ಈ ಜಾಗದ ವಾರಸುದಾರಿಕೆ ಕುರಿತು ಈಗ ಪ್ರಶ್ನೆ ಎದ್ದಿದೆ. ಈ ಜಾಗ ಹಿಂದೆ ಎಲ್.ನಾಗರಾಜು ಎಂಬುವವರ ಹಿಡುವಳಿ ಜಮೀನಾಗಿತ್ತು ಎಂಬ ಕಾರಣಕ್ಕೆ ಗ್ರಾಮ ಲೆಕ್ಕಿಗ ಸತ್ಯನಾರಾಯಣ ಕಂದಾಯ ಕಟ್ಟಿಸಿಕೊಂಡಿದ್ದಾರೆ.
ಸತತ 10 ವರ್ಷ ಯಾರ ಅನುಭವದಲ್ಲಿ ಇಲ್ಲದಿದ್ದರೆ ಅದರ ಹಕ್ಕುದಾರರಿಗೆ ನೋಟಿಸ್ ನೀಡಬೇಕು. ಉತ್ತರ ಬರದಿದ್ದರೆ 'ಕಂದಾಯ ಬೀಳು' ಎಂದು ದಾಖಲಿಸಬೇಕು ಎಂಬುದು ನಿಯಮ. ಇದಕ್ಕೆ ವಿರುದ್ಧವಾಗಿ ಈ ವರ್ಷದ ಜೂ. 23ರಂದು ಕಂದಾಯ ಕಟ್ಟಿಸಿಕೊಳ್ಳಲಾಗಿದೆ. ಕಿರಂಗೂರು ಸ.ನಂ.394/1ರಲ್ಲಿ ಬರುವ ಜಾಗಕ್ಕೆ ಎಲ್.ನಾಗರಾಜು ಅವರಿಂದ ರೂ.7,500 ಕಂದಾಯ ಪಡೆದು ರಸೀದಿ ಕೊಡಲಾಗಿದೆ.
'ಭೂ ಕಂದಾಯ ಅಧಿನಿಯಮದ ಅನುಸಾರ 10 ವರ್ಷ ಕಂದಾಯ ಕಟ್ಟದಿದ್ದರೆ ನೋಟಿಸ್ ನೀಡಬೇಕು. ಆದರೆ, ನೋಟಿಸ್ ನೀಡಿಲ್ಲ. ಕಂದಾಯ ಬೀಳು ಎಂದೂ ದಾಖಲಿಸಿಲ್ಲ. ಇದು ಗೊಂದಲ ಮೂಡಿಸಿದೆ' ಎನ್ನುತ್ತಾರೆ ತಹಶೀಲ್ದಾರ್.
ದಶಕಗಳ ನಂತರ ಪಟ್ಟಣದಲ್ಲಿ ನಡೆದ ಪಾರಂಪರಿಕ ದಸರಾ ಉತ್ಸವಕ್ಕೆ ಅಕ್ಟೋಬರ್ 11, 2010ರಂದು ಇದೇ ಬನ್ನಿ ಮಂಟದಿಂದ ಚಾಲನೆ ನೀಡಲಾಗಿತ್ತು ಎಂಬುದನ್ನು ಸ್ಮರಿಸಬಹುದು.












Click it and Unblock the Notifications