ಸ್ಯಾಂಕಿ ಮರ ಕಡಿತಕ್ಕೆ ತಡೆ, ಹೋರಾಟಗಾರರು ನಿರಾಳ

ಮಲ್ಲೇಶ್ವರ 18ನೇ ರಸ್ತೆ ಮತ್ತು ಸದಾಶಿವನಗರ ಭಾಷ್ಯಂ ವೃತ್ತದ ನಡುವಿನ ಸ್ಯಾಂಕಿ ಕೆರೆ ಮೇಲಿನ ರಸ್ತೆಯನ್ನು ಅಗಲೀಕರಿಸಲು ಮರಗಳನ್ನು ಕಡಿಯಲು ಬಿಬಿಎಂಪಿ ನಿರ್ಧರಿಸಿದೆ. ಇದನ್ನು ವಿರೋಧಿಸಿ ಸ್ಥಳೀಯ ವಾಸಿಗಳು ಮರ ಅಪ್ಪಿಕೋ ಚಳವಳಿಯನ್ನೂ ಮಾಡಿದ್ದರು. ಹೋರಾಟಕ್ಕೆ ಸೊಪ್ಪು ಹಾಕದ ಬಿಬಿಎಂಪಿ ರಾತ್ರೋರಾತ್ರಿ ಮರ ಕಡಿಯಲು ಆರಂಭಿಸಿತ್ತು.
ಡಾ. ಮೀನಾಕ್ಷಿ ಭರತ್ ಮತ್ತಿತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟಿನಲ್ಲಿ ದಾಖಲಿಸಿದ್ದಾರೆ. ಅವರ ಪರ ವಾದ ಕೇಳಿದ ನ್ಯಾ. ಮಂಜುಳಾ ಚೆಲ್ಲೂರ್ ಅವರು, ಮರ ಕಡಿಯುವುದನ್ನು ತಕ್ಷಣ ನಿಲ್ಲಿಸುವಂತೆ ಸಂಜೆ 6.15ಕ್ಕೆ ಅವರ ಚೇಂಬರ್ ನಿಂದಲೇ ಆದೇಶ ನೀಡಿದ್ದಾರೆ. ಇಂಥ ಕಾರ್ಯಾಚರಣೆಗೆ ಇಳಿಯುವ ಮೊದಲು ನಾಗರಿಕರೊಂದಿಗೆ ಮಾತುಕತೆ ನಡೆಸಿಲ್ಲ ಎಂಬುದು ಅರ್ಜಿದಾರರ ದೂರು.
ಇದಕ್ಕೂ ಮೊದಲು ಅಮೂಲ್ಯ ಮರಗಳನ್ನು ಉಳಿಸಲು ಚಳವಳಿ ನಡೆಸುತ್ತಿದ್ದ ಪರಿಸರವಾದಿ ಸುರೇಶ್ ಹೆಬ್ಳಿಕರ್, ಮೀನಾಕ್ಷಿ ಭರತ್, ಹಸಿರು ಉಸಿರು ಸದಸ್ಯ ವಿನಯ್ ಶ್ರೀನಿವಾಸ್ ಮತ್ತು ಮಧಮೇಹದಿಂದ ಬಳಲುತ್ತಿರುವ 63 ವರ್ಷದ ಹಿರಿಯ ನಾಗರಿಕ ಕೃಷ್ಣಮೂರ್ತಿ ಅವರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದರು. ಬಿಬಿಎಂಪಿಯ ಈ ಏಕಪಕ್ಷೀಯ ನಿಲುವನ್ನು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ತೀವ್ರವಾಗಿ ಖಂಡಿಸಿದ್ದಾರೆ.












Click it and Unblock the Notifications