ಬಳ್ಳಾರಿ ಜಿಲ್ಲೆಯ ಹಳ್ಳಿ ದರ್ಶನಕ್ಕೆ ಬಂದ ಕರಡಿಗಳು
ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಂಪ್ಲಿ ಸಮೀಪದ ನಂ. 10 ಮುದ್ದಾಪುರ, ರಾಮಸಾಗರ ಮತ್ತು ಕಂಪ್ಲಿ ಸುತ್ತಲಿನ ಅನೇಕ ಹಳ್ಳಿಗಳಲ್ಲಿ ಮೂರು ಕರಡಿಗಳು ಒಟ್ಟಾಗಿ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮತ್ತು ಆತಂಕ ಮೂಡಿಸಿವೆ.
ಭಾನುವಾರ ಸಂಜೆಯಿಂದಲೇ ಆಗೊಮ್ಮೆ, ಈಗೊಮ್ಮೆ ಕಂಪ್ಲಿಯಲ್ಲಿ ಅಲ್ಲಲ್ಲಿ ಜನರ ಕಣ್ಣಿಗೆ ಕಾಣಿಸಿಕೊಂಡು ಆಕಸ್ಮಿಕ ಎನ್ನುವಂತೆ ಕಾಣೆ ಆಗುತ್ತಿದ್ದ ಈ ಕರಡಿಗಳು, ನಂ. 10 ಮುದ್ದಾಪುರದಲ್ಲಿ ಕಾಣಿಸಿಕೊಂಡಿದ್ದು ಅನೇಕರಲ್ಲಿ ಭಯದ ವಾತಾವರಣ ಮೂಡಿಸಿವೆ. ಭಾನುವಾರ ರಾತ್ರಿ ಬಾಗಿಲುಗಳನ್ನು ಹಾಕಿಕೊಂಡವರು ಸೂರ್ಯ ಮೂಡಿದರೂ ಬಾಗಿಲು ತೆಗೆಯಲು ಧೈರ್ಯ ತೋರಿಸಿಲ್ಲ.
ಕಬ್ಬಿಣ ಗದ್ದೆಯಲ್ಲಿ ಸಿಹಿ ಕಬ್ಬನ್ನು ಜಿಗಿಯುತ್ತಿದ್ದ ಮೂರು ಕರಡಿಗಳನ್ನು ಶಪಿಸುತ್ತಲೇ ಓಡಿಸಲು ಜನರು ಧೈರ್ಯ ತೋರಿಸಿದರು. ಆದರೆ, ಮೈಸೂರಿನಲ್ಲಿ ಆನೆ ಓರ್ವನ ಮೇಲೆ ದಾಳಿ ಮಾಡಿ ಸಾಯಿಸಿದ್ದನ್ನು ನೆನಪಿಸಿಕೊಂಡು ಹಿಂಜರಿದರು. ದರೋಜಿ ಕರಡಿಧಾಮದ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಗಣಿಗಾರಿಕೆಯಿಂದಾಗಿ ಕರಡಿಗಳು ಗಾಬರಿಗೊಂಡು ರಕ್ಷಣೆಗಾಗಿ ಓಡಿ ಬರುತ್ತಿವೆ.
ಆಕ್ರೋಶ : ಅರಣ್ಯ ಇಲಾಖೆಯ ಹಿರಿಯ - ಕಿರಿಯ ಅಧಿಕಾರಿಗಳಿಗೆ ಈ ಮಾಹಿತಿ ನೀಡಿದ್ದರೂ ಕೂಡ ಅವರು ಕರಡಿಗಳನ್ನು ಹಿಡಿಯಲು ಆಸಕ್ತಿ ತೋರುತ್ತಿಲ್ಲ. 2 ಕರಡಿಗಳು ಮಾತ್ರ ನಂ. 10 ಮುದ್ದಾಪುರ ಗ್ರಾಮದ ಕಬ್ಬಿಣ ಗದ್ದೆಯಿಂದ ರಾಮಸಾಗರ - ಬುಕ್ಕಸಾಗರಗಳತ್ತ ಪಯಣ ಬೆಳೆಸಿವೆ. ಕರಡಿಗಳನ್ನು ಹಿಡಿಯಲು ಪೂರ್ವಭಾವಿ ಸಿದ್ಧತೆ ಮಾಡಿಕೊಂಡಿಲ್ಲ ಎಂದು ಕಂಪ್ಲಿ ಹಾಗೂ ಸುತ್ತಲಿನ ಜನಸಾಮಾನ್ಯರು ಅರಣ್ಯ ಇಲಾಖೆ ಸಿಬ್ಬಂದಿಯ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.