ವಿಮಾನದಲ್ಲಿ ಶವದ ಮೇಲಿದ್ದ ನೆಕ್ಲೇಸ್, ಬಳೆ ಮಾಯ

ಕಾನ್ಸೆಪ್ಶನ್ ಡಿಸೋಜಾ ನ್ಯೂಜಿಲ್ಯಾಂಡಿನಲ್ಲಿ ವಾಸವಾಗಿರುವ ತನ್ನ ಮಗಳಾದ ಜುಲ್ಫಿಯಾ ಚೌಧರಿಯವರ ಮನೆಗೆ ಹೋಗಿ ಅಲ್ಲಿ ರಜಾದಿನಗಳನ್ನು ಕಳೆದು ಮರಳಿ ಮುಂಬೈಗೆ ಬರುವಾಗ ದಾರಿಮಧ್ಯೆ ಜೂನ್ 5 ರಂದು ಸಿಂಗಪುರದಲ್ಲಿ ಮೃತಪಟ್ಟಿದ್ದರು.
ಅಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಿದ ಪೋಲಿಸ್ ಅಧಿಕಾರಿಗಳು ಇವರ ಮೃತದೇಹವನ್ನು ಶವದ ಪೆಟ್ಟಿಗೆಯಲ್ಲಿಟ್ಟು ಅದರಲ್ಲಿ ಇವರ ದೇಹದಲ್ಲಿದ್ದ 2 ಚಿನ್ನದ ಉಂಗುರ, ಒಂದು ನಕ್ಲೇಸ್ , 4 ಬಳೆ, ಒಂದು ಜೊತೆ ಕಿವಿಯೋಲೆ ಹಾಗೂ ಇವರ ಬಳಿ ಇದ್ದ ನಗದು ಹಣ(900 ನ್ಯೂಜಿಲೆಂಡ್ ಡಾಲರ್) ಹಾಗೂ ಇವರು ಖರೀದಿಸಿದ್ದ ಚಾಕಲೇಟ್ ಹಾಗೂ ಇತರ ಕೆಲ ವಸ್ತುಗಳನ್ನು ಅದರಲ್ಲಿಟ್ಟು ಸಿಂಗಾಪೂರ ಏರ್ ಲೈನ್ಸ್ ವಿಮಾನದ ಮೂಲಕ ಮುಂಬೈಗೆ ಕಳುಹಿಸಿದ್ದರು.
ಜೂನ್ 7 ರಂದು ಮುಂಬೈಗೆ ಬಂದ ಇವರ ಮೃತದೇಹವನ್ನು ಸ್ವೀಕರಿಸಿದ ಇವರ ಮಗ ಆಶ್ಲೆ ಡಿಸೋಜಾ, ಬಾಂದ್ರಾದ ಬಾಬಾ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಅಲ್ಲಿ ಶವ ಪೆಟ್ಟಿಗೆಯನ್ನು ತೆರೆದಾಗ ಶವಪೆಟ್ಟಿಗೆಯೊಳಗಿದ್ದ ಇವರ ಚಿನ್ನಾಭರಣ ಹಾಗೂ ನಗದು ಕಾಣೆಯಾಗಿತ್ತು.
ಈ ಕುರಿತು ಸಿಂಗಪುರದ ಪೋಲಿಸ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ಅವರಿಗೆ ಸಂಬಂಧ ಪಟ್ಟ ಆಭರಣ ಹಾಗೂ ನಗದನ್ನು ಅವರ ಶವ ಪೆಟ್ಟಿಗೆಯಲ್ಲಿ ಇಟ್ಟಿರುವುದಾಗಿ ತಿಳಿಸಿದರು. ಆನಂತರ ಮುಂಬೈ ವಿಮಾನ ನಿಲ್ಧಾಣ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ಮೃತದೇಹ ತಂದ ವಿಮಾನಯಾನ ಸಂಸ್ಥೆಯೇ ಈ ಘಟನೆಗೆ ಜವಾಬ್ಧಾರಿ ಎಂಬ ಉತ್ತರ ನೀಡಿದರು.
ಈಗ ಸಿಂಗಪುರ ವಿಮಾನ ಯಾನ ಸಂಸ್ಥೆಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಜೊತೆಗೆ ತಮ್ಮ ತಾಯಿಯ ಅಮೂಲ್ಯವಾದ ಈ ಆಭರಣ ಹುಡುಕಿ ಕೊಡುವಂತೆ ಅವರ ಪುತ್ರ ಮುಂಬೈ ಪೊಲೀಸರಿಗೆ ದೂರು ಸಹ ನೀಡಿದ್ದಾರೆ.












Click it and Unblock the Notifications