ಮನೆ ಭೋಗ್ಯದ ನಾಟಕ: ಕಪಟ ದಂಪತಿಯ ಸೆರೆ

ಆರೋಪಿ ಮಹದೇವಪ್ಪ, ಅಷ್ಟಲಕ್ಷ್ಮಿ ಬಡಾವಣೆ ಐದನೇ ಅಡ್ಡರಸ್ತೆಯಲ್ಲಿ ಹಲವು ಮನೆಗಳನ್ನು ನಿರ್ಮಿಸಿದ್ದಾನೆ. ವಿವಾಹಿತನಾದ ಆತ ಸುಮಿತ್ರಮ್ಮನ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ. ಗಂಡ-ಹೆಂಡತಿ ಎಂದು ಪರಿಚಯಿಸಿಕೊಳ್ಳುತ್ತಿದ್ದ ಅವರು ಮನೆಗಳನ್ನು ಮೊದಲು ಭೋಗ್ಯಕ್ಕೆ ನೀಡುತ್ತಿದ್ದರು. ಬಳಿಕ ಸುಮಿತ್ರಮ್ಮನ ಹೆಸರಿನಲ್ಲಿ ಮನೆಯ ಭೋಗ್ಯದ ಕರಾರು ಪತ್ರ ಮಾಡಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆ ನಂತರ ಮಹದೇವಪ್ಪ, 'ಮನೆ ತನ್ನ ಹೆಸರಿನಲ್ಲಿದ್ದು, ಬಾಡಿಗೆ ನೀಡಬೇಕು. ಇಲ್ಲದಿದ್ದರೆ ಮನೆ ಖಾಲಿ ಮಾಡಬೇಕು' ಎಂದು ಮನೆಯಲ್ಲಿ ವಾಸವಿದ್ದವರಿಗೆ ಬೆದರಿಸುತ್ತಿದ್ದ. ಅಲ್ಲದೇ ಆತ ಮನೆಯಲ್ಲಿ ವಾಸವಿದ್ದವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಸಹ ಹೂಡುತ್ತಿದ್ದ. ನ್ಯಾಯಾಲಯದ ವಿಚಾರಣೆ ಸಂದರ್ಭದಲ್ಲಿ 'ಸುಮಿತ್ರಮ್ಮ ಯಾರೆಂದು ಗೊತ್ತಿಲ್ಲ, ಅವರಿಗೂ ನನಗೂ ಸಂಬಂಧವಿಲ್ಲ. ಸುಮಿತ್ರಮ್ಮ ನನ್ನ ಮನೆಯನ್ನು ಅಕ್ರಮವಾಗಿ ಭೋಗ್ಯಕ್ಕೆ ನೀಡಿ ಹಣ ಪಡೆದಿದ್ದಾರೆ' ಎಂದು ಮಹದೇವಪ್ಪ ಹೇಳುತ್ತಿದ್ದ.
ಮಹದೇವಪ್ಪನ ಹೇಳಿಕೆ ಮತ್ತು ಮನೆಯ ದಾಖಲೆ ಪತ್ರಗಳನ್ನು ಆಧರಿಸಿ ನ್ಯಾಯಾಲಯ ಆತನ ಮನೆಯಲ್ಲಿ ವಾಸವಿದ್ದವರಿಗೆ ಮನೆ ಖಾಲಿ ಮಾಡುವಂತೆ ಆದೇಶಿಸುತ್ತಿತ್ತು. ನ್ಯಾಯಾಲಯದ ಆದೇಶವನ್ನೇ ಆಧಾರವಾಗಿಟ್ಟುಕೊಂಡು ಆತ ಮನೆ ಖಾಲಿ ಮಾಡಿಸುತ್ತಿದ್ದ ಮತ್ತು ಭೋಗ್ಯದ ಹಣವನ್ನು ಸಹ ವಾಪಸ್ ನೀಡುತ್ತಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
'ಆರೋಪಿಗಳು ಇದೇ ರೀತಿ ನಾಲ್ಕೈದು ಮಂದಿಗೆ ವಂಚಿಸಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಅವರ ವಿರುದ್ಧ ಮೂರು ಮಂದಿ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು 15 ಲಕ್ಷ ರೂಪಾಯಿಗೂ ಹೆಚ್ಚು ಹಣ ಪಡೆದು ವಂಚಿಸಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ' ಎಂದು ಇನ್ಸ್ ಪೆಕ್ಟರ್ ಎಸ್.ಕೆ.ಉಮೇಶ್ ತಿಳಿಸಿದ್ದಾರೆ.












Click it and Unblock the Notifications