ಹಾಸನ: ಪದ್ಮಾಸನ ಹಾಕಿ ಉಪವಾಸಕ್ಕೆ ಕುಳಿತ ದೇವೇಗೌಡ
'ಮೂರು ವರ್ಷಗಳಿಂದ ಜಿಲ್ಲೆಯಾದ್ಯಂತ ಅಭಿವೃದ್ಧಿ ಕಾರ್ಯಗಳೇ ನಡೆದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೂ ಪತ್ರ ಬರೆದಿದ್ದೇನೆ.ಆದರೆ ಅವರಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದ್ದರಿಂದ ಬೆಳಗ್ಗೆ 9 ಗಂಟೆಯಿಂದ ಸಂಜೆ 5ರ ವರೆಗೆ ಉಪವಾಸ ಸತ್ಯಾಗ್ರಹ ನಡೆಸಲಿದ್ದೇನೆ' ಎಂದು ದೊಡ್ಡಗೌಡರು ಹೇಳಿದ್ದಾರೆ.
'ಉಪವಾಸ ಸತ್ಯಾಗ್ರಹದ ನಂತರ ಒಂದು ವಾರ ಗಡುವು ನೀಡುತ್ತೇನೆ. ಆ ನಂತರವೂ ಯಾವುದೇ ಪ್ರಗತಿ ಕಾಣದಿದ್ದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ' ಎಂದು ಅವರು ಗುಡುಗಿದ್ದಾರೆ. ಹಾಸನ ಜಿಲ್ಲೆಯ ಎಲ್ಲ ಸಮಸ್ಯೆಗಳ ಕುರಿತ ಸಮಗ್ರ ಮಾಹಿತಿಯುಳ್ಳ ಪತ್ರವೊಂದನ್ನು ಮುಖ್ಯಮಂತ್ರಿಗಳಿಗೆ ಬುಧವಾರ ತಲುಪಿಸುವುದಾಗಿ ತಿಳಿಸಿದರು.
ಮಾಜಿ ಸಚಿವ ಹಾಗೂ ಜೆಡಿಎಲ್ಪಿ ನಾಯಕ ಎಚ್.ಡಿ.ರೇವಣ್ಣ, ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ, ಶಾಸಕರಾದ ಸಿ.ಎಸ್.ಪುಟ್ಟೇಗೌಡ, ಕೆ.ಎಂ. ಶಿವಲಿಂಗೇಗೌಡ, ಎಚ್.ಎಸ್. ಪ್ರಕಾಶ್, ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಮುಂತಾದವರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ.
1998ರಲ್ಲೇ ಮಂಜೂರಾಗಿದ್ದ ಬೆಂಗಳೂರು - ಹಾಸನ ರೈಲು ಮಾರ್ಗದ ಕಾಮಗಾರಿಯ ಕುರಿತು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಅವಗೂ ಪತ್ರ ಬರೆದಿದ್ದೆ, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕೇಂದ್ರ ಸರ್ಕಾರದ ಯೋಜನೆಗಳೂ ಇಲ್ಲಿ ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ.
ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಉದ್ಘಾಟನೆ ಮಾಡಿದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಟ್ಟಡವನ್ನು ಇನ್ನೂ ಹಸ್ತಾಂತರ ಮಾಡದಿರುವುದು, ಉದಯಪುರ, ಮೊಸಳೆ ಹೊಸಹಳ್ಳಿ, ಐಟಿಐ ಕಾಲೇಜುಗಳಿಗೆ ಕಟ್ಟಡಗಳಿಲ್ಲ. ಹಾಸನ, ಅರಕಲಗೂಡು, ಬೆಟ್ಟದಪುರ ರಸ್ತೆ ಅಭಿವೃದ್ಧಿ ಯೋಜನೆ ಹಿಂದಿನ ಸರ್ಕಾರದಲ್ಲಿ ಮಂಜೂರಾಗಿದ್ದರೂ ಈಗಿನ ಸರ್ಕಾರ ಅದನ್ನು ರದ್ದುಗೊಳಿಸಿದೆ.