ಧರ್ಮಸ್ಥಳ ಆಣೆ ಪ್ರಮಾಣಕ್ಕೆ ಕೈಕೊಟ್ಟ ಯಡಿಯೂರಪ್ಪ
ಆಣೆ ಪ್ರಮಾಣದ ಬಗ್ಗೆ ಮಾಧ್ಯಮಗಳು ಸಾಕಷ್ಟು ಬರೆದಿವೆ. ಅನೇಕ ಮಠದ ಸ್ವಾಮೀಜಿಗಳು ಹೇಳಿಕೆಗಳನ್ನು ನೀಡಿದ್ದನ್ನೂ ಓದಿದ್ದೇನೆ. ಆದರೆ, ನನ್ನ ಅಂತಿಮ ನಿರ್ಧಾರವನ್ನು ಜೂ.26ರಂದು ಪ್ರಕಟಿಸುತ್ತೇನೆ. ಸುಬ್ರಮಣ್ಯಕ್ಕೆ ಅಭಿವೃದ್ಧಿ ಕಾರ್ಯಕ್ಕಾಗಿ ಹೋಗುತ್ತಿದ್ದು, ಮಂಜುನಾಥನಿಗೂ ಕೈಮುಗಿದು ಬರುತ್ತೇನೆ ಎಂದು ಬುಧವಾರ ಸಂಜೆ ವಿಧಾನಸೌಧದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಬಿಜೆಪಿ ಸರಕಾರದ ಸಾಧನೆಯನ್ನು ಜಾಹೀರು ಮಾಡುವ, ಕನ್ನಡ (ನಿಲುವು ನಿಚ್ಚಳ ಸಾಧನೆ ಸ್ಪಷ್ಟ) ಮತ್ತು ಆಂಗ್ಲ ಭಾಷೆಯಲ್ಲಿರುವ ಕಿರುಹೊತ್ತಗೆಯನ್ನು ಬಿಡುಗಡೆ ಮಾಡಿದ ಯಡಿಯೂರಪ್ಪ ಅವರು, ಕಾಂಗ್ರೆಸ್ ನ 'ಕಾಂಗ್ರೆಸ್ ನಡಿಗೆ, ಜನರ ಬಳಿಗೆ' ಹಳ್ಳಿ ಪಾದಯಾತ್ರೆಯನ್ನು ತೀವ್ರವಾಗಿ ಟೀಕಿಸಿದರು. ಜನರಲ್ಲಿ ಗೊಂದಲ ಉಂಟುಮಾಡಲು ಕಾಂಗ್ರೆಸ್ ಹೊರಟಿರುವ ಹಿನ್ನೆಲೆಯಲ್ಲಿ ವಾಸ್ತವಿಕ ಅಂಕಿಅಂಶಗಳನ್ನು ನಿಮ್ಮ ಮುಂದೆ ತಂದಿದ್ದೇವೆ ಎಂದು ಅವರು ನುಡಿದರು.
ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದ ಯಡಿಯೂರಪ್ಪ, ಇನ್ನೆರಡು ವರ್ಷ ನಾನೇ ಅಧಿಕಾರದಲ್ಲಿ ಮುಂದುವರಿದರೆ ಜನ ತಮ್ಮನ್ನು ಮರೆತುಬಿಡುತ್ತಾರೆಂಬ ಹೆದರಿಕೆ ಅವೆರಡು ಪಕ್ಷಗಳಿಗೆ ಶುರುವಾಗಿದೆ. ಜನ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ. ಆದರೆ, ಅಸ್ತಿತ್ವ ಕಳೆದುಕೊಳ್ಳುವ ಭಯ ಕಾಂಗ್ರೆಸ್ಸಿಗೆ ಆವರಿಸಿದ್ದರಿಂದ ಪಾಪ ಹಳ್ಳಿಗಳಿಗೆ ಹೊರಟಿದ್ದಾರೆ ಎಂದು ಅವರು ಅಪಹಾಸ್ಯ ಮಾಡಿದರು.
ಯಡಿಯೂರಪ್ಪ ಅವರು ತೆರಿಗೆ ವಂಚನೆ ಮಾಡಿದ್ದಾರೆಂದು ಆರೋಪಿಸಿರುವ ಸಿದ್ದರಾಮಯ್ಯ ಅವರು ವಿರುದ್ಧ ಯಡಿಯೂರಪ್ಪ ಹರಿಹಾಯ್ದರು. ವಿರೋಧ ಪಕ್ಷದ ನಾಯಕನಿಂದ ಇಂತಹ ಬೇಜವಾಬ್ದಾರಿ ವರ್ತನೆ ನಿರೀಕ್ಷಿಸರಲಿಲ್ಲ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಮುಖ್ಯಮಂತ್ರಿ ಹೇಳಿದರು.
ತಮ್ಮ ಆಕ್ರೋಶವನ್ನು ಗೌಡರ ಕುಟುಂಬದೆಡೆಗೆ ತಿರುಗಿಸಿದ ಅವರು, ದೆಹಲಿಯಲ್ಲಿ ಕುಮಾರಸ್ವಾಮಿ ಅನೇಕ ಆರೋಪಗಳನ್ನು ಮಾಡಿದ್ದಾರೆ, ಇನ್ನು ಎರಡು ಮೂರು ದಿನಗಳಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಆರೋಪಪಟ್ಟಿಯನ್ನು ಸಿದ್ಧಪಡಿಸುವುದಾಗಿ ಯಡಿಯೂರಪ್ಪ ಎಚ್ಚರಿಕೆ ನೀಡಿದರು.
ಉಳಿದಂತೆ, ಕೇಂದ್ರವನ್ನು ತೆಗಳಿ ಮತ್ತು ತಮ್ಮ ಆಡಳಿತವನ್ನು ಹೊಗಳಲು ಪತ್ರಿಕಾಗೋಷ್ಠಿಯ ಹೆಚ್ಚಿನ ಸಮಯವನ್ನು ಯಡಿಯೂರಪ್ಪ ತೆಗೆದುಕೊಂಡರು. ಸಾಧನೆಯ ಪಟ್ಟಿಯನ್ನು ಬಿಚ್ಚಿಟ್ಟು ಯೋಜನೆಗಳ ವಿವರಗಳನ್ನು ನೀಡಿದರು. ರಾಜ್ಯದಲ್ಲಿ ತೆರಿಗೆ ಸಂಗ್ರಹ ಅಧಿಕವಾಗಿದ್ದು, ಹಣಕಾಸು ಸ್ಥಿತಿ ಸುಭದ್ರವಾಗಿದೆ ಎಂದು ಅವರು ಹೇಳಿದರು.