’ಧರ್ಮಸ್ಥಳ ಮಂಜುನಾಥನ ಮೇಲಾಣೆ’ ಅಂದಾಯ್ತು, ಆಮೇಲೆ

ಜನಪ್ರತಿನಿಧಿಗಳು ಪವಿತ್ರ ಸಂವಿಧಾನ ಕೇಂದ್ರ ಬಿಟ್ಟು, ಧರ್ಮಕ್ಕೂ ರಾಜಕಾರಣಕ್ಕೂ ನಡುವಿನ ಅಂತರ ತೊರೆದು ಧಾರ್ಮಿಕ ಕ್ಷೇತ್ರಗಳನ್ನು ವೈಯಕ್ತಿಕ ದ್ವೇಷ ಸಾಧನೆಯ ಅಖಾಡವನ್ನಾಗಿಸಿಕೊಂಡಿರುವುದಕ್ಕೆ ಇಬ್ಬರು ನಾಯಕರಿಗೆ ಜನತೆ ಛೀಮಾರಿ ಹಾಕಿದ್ದಾರೆ. ಆದರೆ, ಮಂಜುನಾಥ ಸ್ವಾಮಿ ದಯೆಯಿಂದ ಇಬ್ಬರಿಗೂ ಒಳ್ಳೆ ಬುದ್ಧಿ ಬರಲಿ ಎಂದು ಜನತೆ ಹಾರೈಸಿದ್ದಾರೆ. ಶ್ರೀ ಕ್ಷೇತ್ರದಲ್ಲಿ ನಡೆಯುವ ಆಣೆ ಪ್ರಮಾಣ ಕ್ರಿಯೆ ಚುಟುಕು ವಿವರ ಇಲ್ಲಿದೆ.
ಸಾಮಾನ್ಯವಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥನ ಹೆಸರಿನಲ್ಲಿ ಆಣೆ ಮಾಡುವ ಮೊದಲು ಎರಡೆರಡು ಬಾರಿ ಯೋಚಿಸುತ್ತಾರೆ. ಸುಳ್ಳು ಸುಳ್ಳೇ ಆಣೆ ಹಾಕಿದರೆ ಅಪಾಯ ತಪ್ಪಿದ್ದಲ್ಲ ಎಂಬ ನಂಬಿಕೆಯಿದೆ. ಆಸ್ತಿ ವಿವಾದ, ಅಣ್ಣ ತಮ್ಮಂದಿರ ಜಗಳ, ಸುಳ್ಳು ಆರೋಪ, ಮುಂತಾದ ಸಮಸ್ಯೆಗಳು ಇಲ್ಲಿ ಬಗೆಹರಿಸಲಾಗುತ್ತದೆ. ವಾಗ್ದೋಷ, ಆಣೆ ಪ್ರಮಾಣ, ಹುಯಿಲು ಇದು ನಿರ್ಣಯಗೊಳ್ಳುತ್ತದೆ.
* ಆಣೆ ಮಾಡಿದವರು ಹಾಗೂ ವಿರುದ್ಧ ಪಕ್ಷದವರು ಮೊದಲಿಗೆ ತಮ್ಮ ಆಣೆ ಪ್ರಮಾಣ ವಿಷಯವನ್ನು ಸನ್ನಿಧಿ ಮುಖ್ಯಸ್ಥರಿಗೆ ತಿಳಿಸಬೇಕು. ಸಾಮಾನ್ಯವಾಗಿ ಹುಯಿಲು ವಿಭಾಗದವರಿಗೆ ನಿಮ್ಮ ಆಣೆ ವಿಷಯ ಮುಟ್ಟಿಸಬೇಕು. ಈ ಪ್ರಕರಣ ಸುಳ್ಳು ಆರೋಪವಾದ್ದರಿಂದ ನೇರವಾಗಿ ಧರ್ಮಾಧಿಕಾರಿಗಳ ಸಮ್ಮುಖಕ್ಕೆ ಹೋಗಬಹುದು.
* ಹುಯಿಲು ವಿಭಾಗದವರು ಭಕ್ತರ ಅರಿಕೆಯನ್ನು ಪರಿಶೀಲಿಸಿ, ಅರಿಕೆ ಯೋಗ್ಯವಾಗಿದ್ದರೆ ಆಣೆ ಮಾಡಿದವರಿಗೆ ಮತ್ತೆ ಕರೆ ಕಳಿಸುತ್ತಾರೆ.
* ಸಾಮಾನ್ಯವಾಗಿ ಸೋಮವಾರದಂದು ಹೆಚ್ಚಿನ ಸಂಖ್ಯೆಯಲ್ಲಿ ಆಣೆಪ್ರಮಾಣದ ನ್ಯಾಯ ತೀರ್ಮಾನವಾಗುತ್ತದೆ.
* ಧರ್ಮಾಧಿಕಾರಿ(ಡಾ. ವೀರೇಂದ್ರ ಹೆಗ್ಗಡೆ)ಗಳು ನ್ಯಾಯ ತೀರ್ಮಾನ ಮಾಡುತ್ತಾರೆ. ಹಾಗೂ ದೇವರಿಗೆ ತಪ್ಪು ಕಾಣಿಕೆ (ರು. 51, ರು. 101) ಹಾಕಿಸಿ, ಸನ್ನಡತೆಯಿಂದ ಬಾಳುವಂತೆ ಹೇಳುತ್ತಾರೆ.
* ನಿನ್ನ ಮನೆಗೆ ಕಾಲಿಡುವುದಿಲ್ಲ. ನಿನ್ನೊಟ್ಟಿಗೆ ಮಾತಾಡುವುದಿಲ್ಲ, ಪತ್ನಿಯನ್ನು ಮನೆಗೆ ಕರೆತರುವುದಿಲ್ಲ ಮುಂತಾದ ವಾಗ್ದೋಷಗಳ ನ್ಯಾಯ ನಿರ್ಣಯವೂ ನಡೆಯುತ್ತದೆ. ಅಜ್ಜನೋ ಪಿಜ್ಜನೋ ಹಾಕಿದ ಆಣೆ ಪ್ರಮಾಣಗಳು, ಹಳೆ ಆಣೆ, ಹರಕೆ ತೀರಿಸದಿರುವುದು ಮುಂತಾದಕ್ಕೂ ಮುಕ್ತಿ ನೀಡಲಾಗುತ್ತದೆ.
* ಹಣಕಾಸಿನ ವ್ಯಾಜ್ಯಗಳು ಕೋರ್ಟ್ ಮಾದರಿಯಲ್ಲಿ ಬಗೆಹರಿಸಲಾಗುತ್ತದೆ. ಹುಯಿಲು ನಿರ್ಣಯ ಎನ್ನುತ್ತಾರೆ. ಎರಡು ಪಕ್ಷಗಳಿಗೂ ನೋಟಿಸ್ ನೀಡಿ ಸನ್ನಿಧಿಗೆ ಕರೆಸಿಕೊಂಡು ಪರಸ್ಪರ ಆರೋಪ, ಪ್ರತ್ಯಾರೋಪಗಳನ್ನು ಆಲಿಸಿ ವಿವಾದ ಬಗೆಹರಿಸಲಾಗುತ್ತದೆ.
ಸಿಎಂ ಹಾಗೂ ಮಾಜಿ ಸಿಎಂ ಆಣೆ ಪ್ರಮಾಣ ಸುಳ್ಳು ಆರೋಪಕ್ಕೆ ಸಂಬಂಧಿಸಿದೆ. ಆರೋಪ ಮಾಡಿದವರು ತಮ್ಮ ಆರೋಪ ಸತ್ಯ ಇದಕ್ಕೆ ಮಂಜುನಾಥನೇ ಸಾಕ್ಷಿ. ಇಲ್ಲದಿದ್ದರೆ ದೇವರು ನೋಡಿಕೊಳ್ಳುತ್ತಾನೆ ಎಂದು ಹೇಳಬೇಕು. ಇದಕ್ಕೆ ಪ್ರತಿಯಾಗಿ ವಿರುದ್ಧ ಪಕ್ಷದವರು ತಮ್ಮ ಮಾತನ್ನು ಸಮರ್ಥಿಸಿಕೊಳ್ಳಬೇಕು. ಪರಸ್ಪರ ಸತ್ಯವನ್ನು ಹೇಳುತ್ತಾರೆ. ದೇವರ ಮೇಲೆ ನಂಬಿಕೆ ಎಂಬ ವಿಶ್ವಾಸದ ಮೇಲೆ ನಿರ್ಣಯ ಹೊರ ಬೀಳುತ್ತದೆ.












Click it and Unblock the Notifications