ಯಾದಗಿರಿ ಶೈಕ್ಷಣಿಕವಾಗಿ ಯಾಕೆ ಹಿಂದಿದೆ, ಕಾರಣ ಇಲ್ಲಿದೆ

ಜಿಲ್ಲಾ ಕೇಂದ್ರದಿಂದ 10 ಕಿಮೀ ದೂರದ ಹತ್ತಕುಣಿ ಗ್ರಾಮದಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜು ಕಟ್ಟಡವಿಲ್ಲದ ಕಾರಣ ವಿದ್ಯಾರ್ಥಿಗಳಿಗೆ ಮರದ ನೆರಳಲ್ಲೇ ಪಾಠ ಮಾಡಲಾಗುತ್ತಿದ್ದು, ಇದು ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಶಿಕ್ಷಣದ ಶಿಕ್ಷೆ ಎಂದು ಗ್ರಾಮಸ್ಥರು ವ್ಯಂಗ್ಯವಾಡುತ್ತಿದ್ದಾರೆ.
ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಹಣೆ ಪಟ್ಟಿಯಿರುವ ಯಾದಗಿರಿ ಜಿಲ್ಲೆಗೆ ಗ್ರಾಮೀಣ ಪ್ರದೇಶದಲ್ಲೂ ಕಾಲೇಜು ಶಿಕ್ಷಣಕ್ಕೆ ಅನುಕೂಲವಾಗಲೆಂದು 2006-07ರಲ್ಲಿ ಸರ್ಕಾರ ಪಿಯು. ಕಾಲೇಜು ಮಂಜೂರು ಮಾಡಿದೆ. ಅದೇ ಶೈಕ್ಷಣಿಕ ವರ್ಷದಿಂದ ತಾತ್ಕಾಲಿಕವಾಗಿ ಸರ್ಕಾರಿ ಪ್ರೌಢ ಶಾಲೆಯ ಕಟ್ಟಡದಲ್ಲೆ ಕಾಲೇಜು ಪ್ರಾರಂಭಿಸಲಾಯಿತು. ಸತತ ನಾಲ್ಕು ವರ್ಷ ನಡೆದ ಈ ಕಾಲೇಜಿಗೆ ಈಗ ಕಟ್ಟಡದ ಸಮಸ್ಯೆ ಎದುರಾಗಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕೋಣೆಗಳ ಅಭಾವದಿಂದಾಗಿ ಪ್ರೌಢ ಶಾಲೆಯಿಂದ ಕಾಲೇಜು ನೀರಾವರಿ ಇಲಾಖೆಯ ಕಟ್ಟಡಕ್ಕೆ ಸ್ತಳಾಂತರಿಸಲಾಗಿದೆ. ಅಲ್ಲಿಯೂ ಒಂದೇ ಕೋಣೆ ಇದ್ದು ಅದರಲ್ಲೆ ಕಾಲೇಜು ಸಿಬ್ಬಂದಿ, ಕಚೇರಿಗೆ ವ್ಯವಸ್ಥೆ ಮಾಡಿಕೊಂಡು ಉಳಿದ ಇಕ್ಕಟ್ಟಾದ ಸ್ಥಳದಲ್ಲೆ ಪಿಯು. ಎರಡನೇ ವರ್ಷದ ತರಗತಿ ನಡೆಸಲಾಗುತ್ತಿದೆ.
ಇದರಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು ಅವರ ಕೋರಿಕೆಯ ಮೇರೆಗೆ ಕೆಲವೊಮ್ಮೆ ತರಗತಿಯನ್ನು ಬಯಲಲ್ಲಿ ಮರದ ನೆರಳಿಗೆ ಸ್ಥಳಾಂತರಿಸಿ ಪಾಠ ಮಾಡಲಾಗುತ್ತಿದೆ. ಸ್ವಾತಂತ್ರ್ಯಪೂರ್ವ ಕಾಲದಲ್ಲಾಗಿದ್ದರೆ ಇದನ್ನು ಸಹಿಸಬಹುದಿತ್ತು. ಆದರೆ, ಸ್ವಾತಂತ್ರ್ಯ ಬಂದು 63 ವರ್ಷ ಸಂದರೂ ಈ ಪರಿಸ್ಥಿತಿಯಿರುವುದು ನಿಜಕ್ಕೂ ನಮ್ಮ ಅವ್ಯವಸ್ಥೆಗೆ ಹಿಡಿದ ಕನ್ನಡಿ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೋಣೆಗಳ ಅಭಾವದಿಂದಾಗಿ ಮೊದಲ ವರ್ಷದ ಪಿಯು. ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯುವುದಕ್ಕೆ ವಿದ್ಯಾರ್ಥಿಗಳು ನಿರಾಕರಿಸುತ್ತಿದ್ದಾರೆ. ಕಟ್ಟಡದ ಸಮಸ್ಯೆ ಬಗ್ಗೆ ಕಾಲೇಜು ಶಿಕ್ಷಣ ಮಂಡಳಿಗೆ ಮತ್ತು ಶಾಸಕರ ಗಮನಕ್ಕೆ ತರಲಾಗಿದೆ. ಸಮುದಾಯ ಮತ್ತು ಸಹಭಾಗಿತ್ವ ಯೋಜನೆಯಡಿ ಸರ್ಕಾರ ಕಾಲೇಜು ಕಟ್ಟಡಕ್ಕೆ ರೂ.21 ಲಕ್ಷ ಬಿಡುಗಡೆ ಮಾಡಿದೆ. ಆದರೂ ಕಟ್ಟಡಕ್ಕೆ ಸ್ಥಳದ ಸಮಸ್ಯೆ ಎದುರಾಗಿದೆ.
ನಿವೇಶನ ಖರೀದಿಸುವುದಕ್ಕೆ ಸರ್ಕಾರದಲ್ಲಿ ಯಾವುದೇ ಅವಕಾಶವಿಲ್ಲ. ಗ್ರಾಮದವರೆ ನಿವೇಶನ ದಾನವಾಗಿ ನೀಡಬೇಕು. ಹೀಗೆ ನೀಡಿದ ಸ್ಥಳದಲ್ಲೆ ಕಾಲೇಜು ಕಟ್ಟಬೇಕೆಂಬ ಸರ್ಕಾರದ ನಿಯಮವಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸರ್ಕಾರವೇನೋ ಕಾಲೇಜು ಮಂಜೂರು ಮಾಡಿ ಕಟ್ಟಡಕ್ಕೆ ಹಣವನ್ನೂ ಬಿಡುಗಡೆ ಮಾಡಿದೆ. ಬೇಕಾಗಿರುವ ಸಿಬ್ಬಂದಿಯನ್ನೂ ನಿಯೋಜಿಸಿದೆ. ಆದರೆ, ಗ್ರಾಮಸ್ಥರು ಯಾರೂ ನಿವೇಶನ ನೀಡುವುದಕ್ಕೆ ಮುಂದೆ ಬರುತ್ತಿಲ್ಲ. ಹೀಗಾಗಿ ಕಾಲೇಜು ಶಿಕ್ಷಣ ಹತ್ತಿಕುಣಿಯಿಂದ ದೂರವಾಗುವ ಕಾಲ ಸನ್ನಿಹಿತವಾಗಿದೆ.
ಪಕ್ಕದ ಹಳ್ಳಿಯಲ್ಲಿ ನಿವೇಶನ ನೀಡಿ ಕಾಲೇಜು ಸ್ಥಳಾಂತರಕ್ಕೆ ಮನವಿ ಮಾಡಿದಲ್ಲಿ ಹತ್ತಿಕುಣಿಯಿಂದ ಕಾಲೇಜು ಅಲ್ಲಿಗೆ ಸ್ಥಳಾಂತರಿಸುವುದಕ್ಕೆ ಅವಕಾಶವೂ ಇದೆ. ಗ್ರಾಮಸ್ಥರು ದೊಡ್ಡ ಮನಸ್ಸು ಮಾಡಿ ನಿವೇಶನ ದಾನವಾಗಿ ನೀಡುವುದಕ್ಕೆ ಮುಂದೆ ಬಂದು ತಮ್ಮೂರಿಗೆ ಮಂಜೂರಾಗಿರುವ ಕಾಲೇಜು ಉಳಿಸಿಕೊಳ್ಳುವುದಕ್ಕೆ ಮುಂದಾಗಬೇಕು ಎಂದು ಶಿಕ್ಷಣ ಪ್ರೇಮಿಗಳು ಮನವಿ ಮಾಡಿದ್ದಾರೆ.












Click it and Unblock the Notifications