ಭ್ರಷ್ಟಾಚಾರದ ವಿರುದ್ಧ ಹೋರಾಟ : ಈಗ ಬಿಜೆಪಿ ಸರದಿ

ಬಿಜೆಪಿಯ ಈ ಆಂದೋಲನದ ಬಗ್ಗೆ ನವದೆಹಲಿಯಲ್ಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ಅವರು ವಿವರಣೆ ನೀಡಿದರು. ಕಪ್ಪು ಹಣವನ್ನು ಭಾರತಕ್ಕೆ ತರಬೇಕೆಂದು ಬಿಜೆಪಿ ಮೊದಲಿನಿಂದಲೂ ಆಗ್ರಹಿಸುತ್ತಿದೆ. ಆದರೆ, ಇದಕ್ಕೆ ಕಾಂಗ್ರೆಸ್ ಎಳ್ಳಷ್ಟು ಆಸಕ್ತಿ ತೋರಿಸುತ್ತಿಲ್ಲ. ಇದರಿಂದ ಆಂದೋಲನ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದರು.
ಇದೇ ದನಿಯನ್ನು ಬೆಂಗಳೂರಿನಲ್ಲಿ ಪ್ರತಿಧ್ವನಿಸಿರುವ ಬಿಜೆಪಿಯ ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ರವಿಶಂಕರ್ ಪ್ರಸಾದ್ ಅವರು, ಯುಪಿಎ ಸರಕಾರದ ಭ್ರಷ್ಟಾಚಾರದ ಕರಾಳ ಮುಖ ಬಯಲಾಗುತ್ತ ಹೋದಂತೆ ಪ್ರಜಾಪ್ರಭುತ್ವ ವಿರೋಧಿಯಾಗುತ್ತ ಯುಪಿಎ ಹೋಗುತ್ತಿದೆ ಎಂದು ಬಾಬಾ ರಾಮದೇವ್ ಅವರನ್ನು ಬಂಧಿಸಿದ್ದನ್ನು ಪ್ರಸ್ತಾಪಿಸಿ ಅವರು ಹೇಳಿದರು.
ವಿದೇಶದಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತಂದರೆ ಯುಪಿಎದಲ್ಲಿರುವ ಅನೇಕ ರಾಜಕಾರಣಿಗಳ ಹೆಸರು ಹೊರಬರುತ್ತವೆ ಎಂಬ ಹೆದರಿಕೆಯಿಂದ ಮನಮೋಹನ ಸಿಂಗ್ ಅವರ ಸರಕಾರ ಕಪ್ಪು ಹಣವನ್ನು ವಾಪಸ್ ತರಲು ಹಿಂದೇಟು ಹಾಕುತ್ತಿದೆ ಎಂದು ರವಿಶಂಕರ್ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.
ಮಾರನ್ ತೊಲಗಬೇಕು : ತಮ್ಮ ವಾಗ್ದಾಳಿಯನ್ನು ಕೇಂದ್ರ ಜವಳಿ ಸಚಿವ ದಯಾನಿಧಿ ಮಾರನ್ ಅವರ ಮೇಲೆ ಹರಿಸಿದ ಪ್ರಸಾದ್, 2ಜಿ ತರಂಗಗುಚ್ಛ ಹಗರಣದಲ್ಲಿ ಭಾಗಿಯಾಗಿರುವ ಮಾರನ್ ಅವರು ಯುಪಿಎ ಸರಕಾರದಿಂದ ಕೂಡಲೆ ತೊಲಗಬೇಕು ಎಂದು ಬಿಜೆಪಿ ವಕ್ತಾರರೂ ಆಗಿರುವ ಆಗ್ರಹಿಸಿದರು.
ಮೊಬೈಲ್ ಕಂಪನಿ ಏರ್ ಸೆಲ್ ತಮ್ಮ ತೆಕ್ಕೆಗೆ ಹಾಕಿಕೊಂಡಿರುವ ಮಾರನ್ ಅವರು, ಸನ್ ಡೈರೆಕ್ಟ್ ಗೆ 750 ಕೋಟಿ ರು. ವಿದೇಶಿ ಬಂಡವಾಳ ಹರಿದು ಬರುವಲ್ಲಿ ದಯಾನಿಧಿ ಅವರೇ ನೇರವಾಗಿ ಹೊಣೆಯಾಗಿದ್ದಾರೆ. 2ಜಿ ಹಗರಣದ ವಿಚಾರಣೆ ನಡೆಸುತ್ತಿರುವ ಜಂಟಿ ಸಂಸದೀಯ ಸಮಿತಿ ಮಾರನ್ ಅವರನ್ನು ವಿಚಾರಣೆಗೆ ಕರೆಯಿಸಿರುವುದು ಭ್ರಷ್ಟಾಚಾರದಲ್ಲಿ ಮಾರನ್ ಭಾಗವಹಿಸಿದ್ದಕ್ಕೆ ಸಾಕ್ಷಿ ಎಂದು ಅವರು ಹೇಳಿದರು.
ಬಾಬಾ ಆಸ್ತಿ ಬಹಿರಂಗ : ಕಪ್ಪು ಹಣವನ್ನು ಭಾರತಕ್ಕೆ ವಾಪಸ್ ತರಬೇಕು ಮತ್ತು ಭ್ರಷ್ಟಾಚಾರವನ್ನು ಮಟ್ಟಹಾಕಬೇಕೆಂದು ಆಗ್ರಹಿಸಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಬಾಬಾ ರಾಮದೇವ್ ಅವರು ತಮ್ಮ ಆಸ್ತಿಯನ್ನು ತಮ್ಮ ಅಂತರ್ಜಾಲ ತಾಣ www.divyayoga.comದಲ್ಲಿ ಬಹಿರಂಪಡಿಸಿರುವುದಾಗಿ ಹೇಳಿದ್ದಾರೆ.
ಮೌನ ವ್ರತಕ್ಕೆ ಕುಳಿತಿದ್ದ ಬಾಬಾ ರಾಮದೇವ್ ಅವರು ತಮ್ಮ ಮೌನವನ್ನು ಮುರಿದು, ಬಲಗೈ ಬಂಟ ಬಾಲಕೃಷ್ಣನ್ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ, ಪತಂಜಲಿ ಯೋಗಪೀಠ ಸೇರಿದಂತೆ ಎಲ್ಲ ಆಸ್ತಿಗಳ ಮೊತ್ತ 426 ಕೋಟಿ ರು. ಎಂದು ಹೇಳಿದರು. ಆದರೆ, ಆದಾಯ ತೆರಿಗೆ ಮತ್ತು ಟ್ರಸ್ಟ್ ನ ಅಧೀನದಲ್ಲಿರುವ ಕಂಪನಿಗಳ ವಿವರ ನೀಡಲು ನಿರಾಕರಿಸಿದರು.












Click it and Unblock the Notifications