ಜಂಬುನಾಥ ದೇಗುಲಕ್ಕೆ ಅಕ್ರಮ ಗಣಿಗಾರಿಕೆ ಪೆಟ್ಟು

ಜಂಬುನಾಥ ಬೆಟ್ಟದಲ್ಲಿರುವ ಐತಿಹಾಸಿಕ ಪ್ರಸಿದ್ಧಿ ಜಂಬುನಾಥ ದೇವಸ್ಥಾನದ ಸುತ್ತಲೂ ಅವ್ಯಾಹತವಾಗಿ ನಡೆಯುತ್ತಿರುವ ಗಣಿಗಾರಿಕೆಯಿಂದ ದೇವಸ್ಥಾನ ಶಿಥಿಲವಾಗಿ ಭಕ್ತರ ಶ್ರದ್ಧೆ - ಭಕ್ತಿಗಳಿಗೆ ಅಸಮಾಧಾನ ಉಂಟಾಗುತ್ತಿದೆ ಎಂದು ಸುಪ್ರೀಂಕೋರ್ಟ್ನಲ್ಲಿ ದಾಖಲಿಸಲಾಗಿದ್ದ ಸಾರ್ವಜನಿಕ ಹಿತಾಶಕ್ತಿ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಭಾರತೀಯ ಪುರಾತತ್ವ ಇಲಾಖೆಗೆ ಸೂಚಿಸಿತ್ತು.
ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳ ತಂಡ, ರಾಜ್ಯ ಪುರಾತತ್ವ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪುರಾತತ್ವ ತಜ್ಞರ ತಂಡ ಸೋಮವಾರ ಬೆಳಗ್ಗೆ ೧೦ ಗಂಟೆ ಸುಮಾರಿಗೆ 'ಹಂಪೆ ಪ್ರದೇಶಾಭಿವೃದ್ಧಿ ಪ್ರಾಧಿಕಾರ"ದ ಸಭಾಂಗಣದಲ್ಲಿ ಸಭೆ ನಡೆಸಿ, ಸಾಕಷ್ಟು ದಾಖಲೆಗಳನ್ನು ಪರಿಶೀಲಿಸಿ ಜಂಬುನಾಥ ಗುಡ್ಡ ಮತ್ತು ದೇವಸ್ಥಾನಕ್ಕೆ ಭೇಟಿ ನೀಡಿತ್ತು. ದೇವಸ್ಥಾನಕ್ಕೆ ಭೇಟಿ ನೀಡಿದ್ದ ತಂಡದ ಸದಸ್ಯರು ಜಂಬುನಾಥ ದೇವಸ್ಥಾನ ಸೇರಿ ಸ್ಮಾರಕಗಳನ್ನು ವಿವರವಾಗಿ ಪರಿಶೀಲಿಸಿ, ಛಾಯಾಚಿತ್ರ ತೆಗೆದರು.
ಆ ನಂತರ ದೇವಸ್ಥಾನದ ಅರ್ಚಕ ಆನಂದ ಸ್ವಾಮಿ, ಅಲ್ಲಿಯ ನಿವಾಸಿ ಶಿಲ್ಪ ಅವರಿಂದ ಗಣಿಗಾರಿಕೆಯ ಕುರಿತು ಮಾಹಿತಿ ಸಂಗ್ರಹ ಮಾಡಿದರು. ದೇವಸ್ಥಾನದ ಗರ್ಭಗುಡಿ, ಕಂಭಗಳು, ನೀರು ಕಾಣದ ಬಾವಿ, ಸ್ಥಳ ಮಹಿಮೆ, ಐತಿಹಾಸಿಕ - ಧಾರ್ಮಿಕ ಶಕ್ತಿಗಳ ಮಾಹಿತಿಗಳನ್ನು ಪಡೆದು, ಗಣಿಗಾರಿಕೆಯಿಂದ ದೇವಸ್ಥಾನದಲ್ಲಿ ಉಂಟಾಗಿರುವ ಬಿರುಕುಗಳನ್ನು ಪರಿಶೀಲಿಸಿ ದಾಖಲಿಸಿಕೊಂಡರು.
ಜಂಬುನಾಥನ ಬೆಟ್ಟದಲ್ಲಿ ದೇವಸ್ಥಾನಕ್ಕೆ ಪಕ್ಕದಲ್ಲೇ ಆರ್. ಪೊಂಪಾಪತಿ (ಆರ್ಪಿಪಿ) ಮೈನ್ಸ್ ಕಂಪನಿ ಗಣಿಗಾರಿಕೆ ನಡೆಸುತ್ತಿದ್ದು, ಈ ಪ್ರದೇಶಕ್ಕೆ ತೆರಳಿದ ತಂಡ ಸದಸ್ಯರು ಗಣಿ ಗುತ್ತಿಗೆದಾರರಿಂದ ಸಾಕಷ್ಟು ಮಾಹಿತಿಯನ್ನು ಸಂಗ್ರಹ ಮಾಡಿದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಈ ತಂಡದ ಸದಸ್ಯರು, ಸುಪ್ರೀಂಕೋರ್ಟ್ ೩ ತಿಂಗಳಲ್ಲಿ ವರದಿ ಸಲ್ಲಿಸಲು ತಿಳಿಸಿದೆ. ಈ ಹಿನ್ನಲೆಯಲ್ಲಿ ವಿವಿಧ ಹಂತಗಳಲ್ಲಿ ಅಧಿಕಾರಿಗಳ, ಸಾರ್ವಜನಿಕರ ಹಾಗೂ ಭಕ್ತರ ಸಭೆಗಳನ್ನು ನಡೆಸಿ ಈ ಕುರಿತು ವರದಿ ಸಲ್ಲಿಸಲಾಗುತ್ತದೆ ಎಂದರು.












Click it and Unblock the Notifications