ಸಂಧಾನ ವಿಫಲ, ಶನಿವಾರದಿಂದ ಬಾಬಾ ಆಮರಣಾಂತ ಸತ್ಯಾಗ್ರಹ

ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ನಡೆಸುತ್ತಿರುವ ಹೋರಾಟದಿಂದ ಕಂಗೆಟ್ಟಿರುವ ಕೇಂದ್ರ ಸರಕಾರ, ಬಾಬಾ ಅವರು ಉಪವಾಸ ಸತ್ಯಾಗ್ರಹಕ್ಕೆ ಕೂಡದಂತೆ ಮನವೊಲಿಸಲು ಎಲ್ಲ ಕಸರತ್ತು ನಡೆಸಿತ್ತು. ಸಂಧಾನ ನಡೆಸಲೆಂದು ಪಂಚತಾರಾ ಹೊಟೇಲು ಕ್ಲಾರಿಡ್ಜಸ್ ಗೆ ಮಾತುಕತೆಗೆ ಕರೆದಿತ್ತು. ಕೇಂದ್ರ ಸಚಿವರಾದ ಕಪಿಲ್ ಸಿಬಲ್ ಮತ್ತು ಸುಬೋಧಕಾಂತ್ ಸಹಾಯ್ ಅವರು ಐದು ಗಂಟೆ ಮಾತುಕತೆ ನಡೆಸಿದರು.
ಆದರೆ, ಮಾತುಕತೆ ಫಲಪ್ರದವಾಗದ ಕಾರಣ ರಾಮದೇವ್ ಬಾಬಾ ಅವರು ನಾಳೆಯಿಂದ ಸತ್ಯಾಗ್ರಹ ಆರಂಭಿಸಲಿದ್ದಾರೆ. ರಾಮಲೀಲಾ ಮೈದಾನದಲ್ಲಿ ಈಗಾಗಲೆ ಆರ್ಎಸ್ಎಸ್ ಕಾರ್ಯಕರ್ತರು ಸೇರಿದಂತೆ ಸಾವಿರಾರು ಬಾಬಾ ಬೆಂಬಲಿಗರು ನೆರೆದಿದ್ದಾರೆ. ಜನ ಲೋಕಪಾಲ ಮಸೂದೆ ಮಂಡನೆಗಾಗಿ ಹೋರಾಟ ನಡೆಸಿರುವ ಅಣ್ಣಾ ಹಜಾರೆ ಅವರು ಬಾಬಾ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದ್ದಾರೆ.
ಕೇಂದ್ರದ ಜೊತೆ ಅಸಮಾಧಾನ ವ್ಯಕ್ತಪಡಿಸಿರುವ ಬಾಬಾ, ಭ್ರಷ್ಟಾಚಾರದ ವಿರುದ್ಧ ಹೋರಾಟ ಮತ್ತು ವಿದೇಶಿ ಬ್ಯಾಂಕುಗಳಲ್ಲಿರುವ ಕಪ್ಪುಹಣ ತರುವ ವಿಷಯದಲ್ಲಿ ಇಬ್ಬರೂ ಒಮ್ಮತಕ್ಕೆ ಬಂದಿಲ್ಲ ಎಂದು ನುಡಿದರು. ಆದರೆ, ಸಿಬಲ್ ಆಶಾಭಾವನೆ ವ್ಯಕ್ತಪಡಿಸಿದ್ದು, ಇದು ಒಂದೆರಡು ಗಂಟೆಗಳಲ್ಲಿ ಪರಿಹಾರ ಕಂಡುಕೊಳ್ಳುವ ವಿಷಯಗಳಲ್ಲ. ಗಂಭೀರ ವಿಷಯಗಳಾದ್ದರಿಂದ ಸಮಯ ತೆಗೆದುಕೊಳ್ಳುತ್ತದೆ ಎಂದು ನುಡಿದರು.
ಯೋಗದಿಂದ ರಾಜಕೀಯದತ್ತ ಒಲಿದಿರುವ ರಾಮದೇವ್ ಬಾಬಾ ಅವರು ರಹಸ್ಯವಾಗಿ ಕೇಂದ್ರದೊಡನೆ ಮಾತುಕತೆ ನಡೆಸಿದ್ದು, ಅವರ ಮನವೊಲಿಸುವಲ್ಲಿ ಕೇಂದ್ರ ಸಫಲವಾಗಿದೆ ಎಂಬಿತ್ಯಾದಿ ಸುದ್ದಿಗಳು ಹಾರಾಡುತ್ತಿದ್ದವು. ಕೇಂದ್ರವನ್ನು ತಮಗೆ ತಕ್ಕಂತೆ ಬಗ್ಗಿಸುವ ಬದಲು, ಬಾಬಾ ಅವರೇ ಕೇಂದ್ರ ಮಣಿಸಿದಂತೆ ಬಗ್ಗುತ್ತಿದ್ದಾರೆ ಎಂಬ ಸುದ್ದಿಯೂ ಹಬ್ಬಿತ್ತು. ಈಗ ಅವೆಲ್ಲ ಹುಸಿಯಾಗಿವೆ.












Click it and Unblock the Notifications