ಹಜಾರೆ ನಂತರ ಬಾಬಾ ಉಪವಾಸ ಸತ್ಯಾಗ್ರಹ

ಲೋಕಪಾಲ ಮಸೂದೆ ಜಾರಿಗೆ ಅಣ್ಣಾ ಹಜಾರೆ ನೀಡಿದ ಹೊಡೆತದಿಂದಲೇ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿರುವ ಕೇಂದ್ರ ಯುಪಿಎ ಸರಕಾರ ರಾಮ್ ದೇವ್ ಅವರ ಮನವೊಲಿಕೆಗೆ ಪ್ರಯತ್ನಿಸುತ್ತಿದೆ.
ಉಪವಾಸ ನಡೆಸುವ ಸಲುವಾಗಿ ಇಂದು ಅಪರಾಹ್ನ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಕ್ಯಾಬಿನೆಟ್ ಮಂತ್ರಿಗಳಾದ ಕಪಿಲ್ ಸಿಬಲ್, ಪಿಕೆ ಬನ್ಸಾಲ್ ಮತ್ತು ಸುಭೋದ್ ಕಾಂತ್ ಮುಂತಾದವರು ಭೇಟಿಯಾದರು. ನಾಳೆ ಪ್ರಣಬ್ ಮುಖರ್ಜಿ ಕೂಡ ಅವರನ್ನು ಭೇಟಿಯಾಗುವ ನಿರೀಕ್ಷೆಯಿದೆ.
ಸ್ವಿಸ್ ಬ್ಯಾಂಕ್ ನಲ್ಲಿ ಕೊಳೆಯುತ್ತಿರುವ ಕಪ್ಪು ಹಣದ ಕುರಿತು ಕೇಂದ್ರ ಸರಕಾರ ದೃಢ ನಿರ್ಧಾರ ತಾಳುವವರೆಗೆ ಅವರು ಉಪವಾಸ ಸತ್ಯಾಗ್ರಹ ಮುಂದುವರೆಸುವ ನಿರೀಕ್ಷೆಯಿದೆ. ಉಪವಾಸ ಸತ್ಯಾಗ್ರಹ ನಿರ್ಧಾರ ಕೈಬಿಡುವಂತೆ ಪ್ರಧಾನ ಮಂತ್ರಿ ಮನಮೋಹನ ಸಿಂಗ್ ಮಾಡಿದ ವಿನಂತಿಯನ್ನು ಬಾಬಾ ರಾಮ್ ದೇವ್ ತಿರಸ್ಕರಿಸಿದ್ದಾರೆ.
ರಾಜಕಾರಣಿಗಳು ಹಾಗೂ ಇತರೆ ಉದ್ಯಮಿಗಳು ವಿದೇಶದಲ್ಲಿ ಹೊಂದಿರುವ ಕಪ್ಪು ಹಣವನ್ನು ಭಾರತಕ್ಕೆ ತಂದು ಸಾರ್ವಜನಿಕ ಸ್ವತ್ತಾಗಿಸಬೇಕು. ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತೆಸೆಯಲು ಇದು ಸಕಾಲ. ದೇಶದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರಕ್ಕೆ ಕಪ್ಪು ಹಣದ ಚಲಾವಣೆ ಕಾರಣವಾಗಿದೆ ಎಂದು ರಾಮ್ ದೇವ್ ಹೇಳಿದ್ದಾರೆ.
ಲಕ್ಷಾಂತರ ಕೋಟಿ ರುಪಾಯಿ ಹಣವನ್ನು ವಿದೇಶಿ ಬ್ಯಾಂಕುಗಳಲ್ಲಿ ಠೇವಣಿ ಇಡಲಾಗುತ್ತಿದೆ. ಬೃಹತ್ ಮೊತ್ತದ ನೋಟುಗಳನ್ನು ಹಿಂದಕ್ಕೆ ಪಡೆದರೆ ಭ್ರಷ್ಟಾಚಾರವನ್ನು ಹೋಗಲಾಡಿಸಬಹುದು ಎಂದು ಬಾಬಾ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications