ಕಾಂಗ್ರೆಸ್ ಶವಪೆಟ್ಟಿಗೆಗೆ ಮೊಳೆ ಹೊಡೆದ ಭಾರದ್ವಾಜ್

ಮೊನ್ನೆ ಉಪಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ಠೇವಣಿ ನಷ್ಟ ಅನುಭವಿಸಿರುವುದನ್ನು ನೋಡಿದರೆ ಇದು ಇನ್ನಷ್ಟು ನಿಚ್ಚಳವಾಗುತ್ತದೆ. ಹಾಗೆ ನೋಡಿದರೆ ಅಸೆಂಬ್ಲಿ ಉಪಚುನಾವಣೆಯೇ ಆಗಲಿ ಪಂಚಾಯಿತಿ ಚುನಾವಣೆಯೇ ಆಗಲಿ ಮತದಾರ ಪ್ರಭು ಕಾಂಗ್ರೆಸ್ ನತ್ತ ತಿರುಗಿಯೂ ನೋಡಿಲ್ಲ. ಒಟ್ಟಿನಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಸಾಕಷ್ಟು ಫಜೀತಿಗಿಟ್ಟುಕೊಂಡಿದೆ.
ಕುತೂಹಲಕಾರಿ ಸಂಗತಿಯೆಂದರೆ ಭಾರದ್ವಾಜ್ ಆಡುತ್ತಿರುವ ಆಟದಲ್ಲಿ ಯಡಿಯೂರಪ್ಪ ವಿಜಯೀಭವ ಆಗುವ ಎಲ್ಲ ಲಕ್ಷಣಗಳೂ ಇವೆ. ದೇಶದ ಬಹುತೇಕ ಕಾನೂನು ಪಂಡಿತರು 'ಭಾರದ್ವಾಜ್ ವಿಶೇಷ ವರದಿ' ಯನ್ನು ಒಪ್ಪುತ್ತಿಲ್ಲ. ಯಡಿಯೂರಪ್ಪ ಸರಕಾರವನ್ನು ಉರುಳಿಸಿ ಎಂದು ಸಲ್ಲಿಸಿರುವ ವರದಿಯಲ್ಲಿ ಕಾನೂನಾತ್ಮಕವಾಗಿ ಯಾವುದೇ ಹುರುಳಿಲ್ಲ ಎಂಬ ವಾದ ಸರಣಿ ನಡೆಯುತ್ತಿದೆ. ಈ ಹಂತದಲ್ಲಿ ಭಾರದ್ವಾಜ್ ಅವರನ್ನು ಯಾರಾದರೂ ಬೆಂಬಲಿಸುತ್ತಿದ್ದಾರೆ ಎಂದರೆ ಅದು ರಾಜ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ಮಾತ್ರ. [ಕೆಪಿಎಲ್ ಹಣಾಹಣಿ]
ಬಿಜೆಪಿ ಸರಕಾರದ ಕಥೆ ಮುಗಿದೇ ಹೋಯಿತು ಎಂದು ನಿದ್ದೆಯಲ್ಲಿದ್ದ ನಿಸ್ತೇಜ ಕಾಂಗ್ರೆಸ್ ಕಿವಿಯಲ್ಲಿ ಯಾರೋ ಪಿಸುಗುಟ್ಟಿದಂತಿದೆ. ಅದಕ್ಕೆ ರಾಜಧಾನಿಯಲ್ಲಿ ರಸ್ತೆ ತಡೆ ಮೂಲಕ ತಮ್ಮ ಅಸ್ತಿತ್ವವನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ.
ಒಂದು ವೇಳೆ, ಭಾರದ್ವಾಜ್ ವರದಿಗೆ ಕೇಂದ್ರವು ಮಣೆ ಹಾಕಿದ್ದೇ ಆದರೆ ಯಡಿಯೂರಪ್ಪ ತಾತ್ಕಾಲಿಕವಾಗಿ ಅಧಿಕಾರ ವಂಚಿತರಾಗಬಹುದು. ಆದರೆ ಅನುಕಂಪದ ಅಲೆ ಅವರ ದಿಕ್ಕಿನಲ್ಲಿ ಬಲವಾಗಿ ಬೀಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಳೆದ ಬಾರಿ ಪಿತೃವಾಕ್ಯ ಪರಿಪಾಲಕ ಎಚ್. ಡಿ. ಕುಮಾರಸ್ವಾಮಿ ಅವರು ಯಡಿಯೂರಪ್ಪಗೆ ಇಂತಹ ಸುವರ್ಣಾವಕಾಶ ಕಲ್ಪಿಸಿದ್ದರು.
ಭಂಡ ಧೈರ್ಯವೋ, ಮತ್ತೊಂದೋ... ಒಟ್ಟಿನಲ್ಲಿ ಯಡಿಯೂರಪ್ಪ ಕಳೆದ ಮೂರು ವರ್ಷಗಳಲ್ಲಿ ಅಧಿಕಾರಕ್ಕೆ ಅಂಟಿಕೊಂಡಿದ್ದನ್ನು ನೋಡಿದರೆ ಯಾರೇ ಆಗಲಿ ಮೆಚ್ಚಬೇಕು. ಒಂದೆಡೆ ಪಕ್ಷದೊಳಗಿನ ಭಿನ್ನಮತ ಮತ್ತೊಂದೆಡೆ ರಾಜ್ಯಪಾಲ, ಕೋರ್ಟು ಹೀಗೆ ಕಷ್ಟಕೋಟಲೆಗಳಲ್ಲಿ ಅವರು ಸಿಕ್ಕಿದ್ದಂತೂ ನಿಜ. ಇದೇ ಉಸಿರಿನಲ್ಲಿ ಹೇಳುವುದಾದರೆ ಯಡಿಯೂರಪ್ಪ ಅವರ ಆಡಳಿತ ಶೂನ್ಯವಾಗಿತ್ತು ಎಂದು ಹೇಳದೆ ವಿಧಿಯಿಲ್ಲ. ಒಂದು ರೀತಿ ಅಪ್ಪ-ಅಮ್ಮ ಜಗಳದಲ್ಲಿ ರಾಜ್ಯದ ಜನತೆ ಬಡವಾದರು ಅಷ್ಟೆ.












Click it and Unblock the Notifications