ಕನ್ನಿಮೋಳಿಗೆ ಜಾಮೀನು ನಿರಾಕರಿಸಿದ ತ.ನಾಡು ಮತದಾರ

'ಅಮ್ಮ' ಜಯಲಲಿತಾ ನೀಡಬೇಕಿರುವ ಲ್ಯಾಪ್ ಟಾಪ್ ನಿರೀಕ್ಷೆಯಲ್ಲಿರುವ ತಮಿಳುನಾಡಿನ ಮಹಾಜನತೆ ಭ್ರಷ್ಟತೆಯನ್ನು ಹೊದ್ದು ಮಲಗಿದ್ದ ಡಿಎಂಕೆ ಪಕ್ಷದ ಮುಸುಕು ಎಳೆದು ಒಗೆದಿದ್ದಾರೆ. ಸ್ಪಷ್ಟ ಬಹುಮತ ಪಡೆದಿರುವ ಜಯಲಲಿತಾ ಮೂರನೇ ಬಾರಿ ಮುಖ್ಯಮಂತ್ರಿ ಪಟ್ಟವೇರಲು ಸೀರೆ, ಕುಬುಸ, ಬುಲೆಟ್ ಪ್ರೂಫ್ ಹೊದಿಕೆಯನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. 2ಜಿ ತರಂಗಗುಚ್ಛ ಹಗರಣದಲ್ಲಿ ಹಣ ತಿಂದ ಆರೋಪ ಹೊತ್ತಿರುವ ಕನ್ನಿಮೋಳಿಗೆ 'ಜಾಣ' ಮತದಾರರು ಸ್ಪಷ್ಟವಾಗಿ ಜಾಮೀನು ನಿರಾಕರಿಸಿದ್ದಾರೆ.
ಎಐಎಡಿಎಂಕೆ ಬಣದ ಹರ್ಷ ಮುಗಿಲು ಮುಟ್ಟಿದ್ದರೆ, ಡಿಎಂಕೆ ಪಕ್ಷದ ಕಾರ್ಯಕರ್ತರು ಬಾಗಿಲು ಹಾಕಿಕೊಂಡು ನಟ ಶಿವಾಜಿಪ್ರಭು ನಟಿಸಿದ ಹಚ್ಚಹಳೆಯ ಚಿತ್ರಗಳನ್ನು, 'ಮಾನದ ಮಯಿಲಾದ' ಮುಂತಾದ ಸಂಗೀತ ಕಾರ್ಯಕ್ರಮಗಳನ್ನು ನೋಡಿಕೊಂಡು ಕಾಲಕಳೆಯುತ್ತಿದ್ದಾರೆ. ಅಮ್ಮನಿಗೆ ಓಟು ಹಾಕಿದ ಮತದಾರರು ಮಾತ್ರ ಗೂಗಲ್ ಕ್ರೋಮ್ ಬುಕ್ ಲ್ಯಾಪ್ ಟಾಪ್ ನಿರೀಕ್ಷೆಯಲ್ಲಿ ಆನಂದತುಂದಿಲರಾಗಿದ್ದಾರೆ.
ಎಲ್ಲರೂ ನಿರೀಕ್ಷಿಸುತ್ತಿರುವ ಕನ್ನಿಮೋಳಿ ಜಾಮೀನು ವಿಚಾರಣೆ ನಾಳೆ ಸುಪ್ರೀಂ ಕೋರ್ಟ್ ಎದುರಿಗೆ ಬರುತ್ತಿದೆ. ಕನ್ನಿಮೋಳಿ ಒಬ್ಬ ತಾಯಿಯಾಗಿರುವ ಕಾರಣ ಜಾಮೀನು ನೀಡಬೇಕೆಂದು ಅವರ ವಕೀಲ ರಾಮ್ ಜೇಠ್ಮಲಾನಿ ವಾದ ಮಾಡಿದ್ದಾರೆ. ಆದರೆ, ಸುಪ್ರೀಂ ಕೋರ್ಟ್ ಈ ವಾದವನ್ನು ನಿರಾಕರಿಸಿದರೆ ಕನ್ನಿಮೋಳಿ ತಿಹಾರ್ ಜೈಲಿಗೆ ಹೋಗುವುದು ಹೆಚ್ಚುಕಡಿಮೆ ಖಚಿತ.












Click it and Unblock the Notifications