ರಕ್ಕಸ ಗಂಡಂದಿರಿಗೆ ಇಬ್ಬರು ಹೆಂಡಂದಿರ ಬಲಿ
ಮೊದಲ ಘಟನೆ ನಡೆದಿರುವುದು ಶಿವಾಜಿನಗರದ ಜೆಸಿ ಕಾಲೋನಿಯಲ್ಲಿ. ಸುಂದರವಾದ ಹೆಂಡತಿ ರಿಜ್ವಾನಾ ಬಾನು ತಾನಿಲ್ಲದಾಗ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದಾಳೆ ಎಂದು ಶಂಕಿಸಿ, ಮನಸೋ ಇಚ್ಛೆ ಥಳಿಸಿ, ಕೊನೆಗೆ ಸುತ್ತಿಗೆಯಿಂದ ತಲೆ ಒಡೆದು ಮಡದಿಯನ್ನು ಭೀಕರವಾಗಿ ಹತ್ಯೆಗೈದಿದ್ದಾನೆ ಯುಸೂಫ್. ಇಡೀ ರಾತ್ರಿ ಹೃದಯ ಬಿರಿಯುವಂತೆ ಅಳುತ್ತಿದ್ದ 6 ವರ್ಷ ಮತ್ತು 10 ತಿಂಗಳ ಮಕ್ಕಳನ್ನು ಲೆಕ್ಕಿಸದೆ ಶವದೊಡನೆ ಕೋಣೆಯಲ್ಲೇ ಕಾಲ ಕಳೆದಿದ್ದಾನೆ.
ಈ ಭೀಕರ ಹತ್ಯೆಯನ್ನು ಕಣ್ಣಾರೆ ಕಂಡ 6 ಮಗಳು ಹೇಗೋ ತನ್ನ ಚಿಕ್ಕಮ್ಮನಿಗೆ ಫೋನ್ ಮಾಡಿ ತಾಯಿಯ ಸಾವನ್ನು ತಿಳಿಸಿದ್ದಾಳೆ. ಅವರಿದ್ದ ಮನೆಗೆ ಧಾವಿಸಿಬಂದ ಸಂಬಂಧಿಕರನ್ನು ಕೂಡ ಸುತ್ತಿಗೆಯಿಂದ ಹೊಡೆಯಲು ತಲೆ ಮೇಲೆ ಶಿರಸ್ತ್ರಾಣ ಧರಿಸಿದ್ದ ಯುಸೂಫ್ ಯತ್ನಿಸಿದ್ದಾನೆ. ಎಂಟು ವರ್ಷಗಳ ಹಿಂದೆ ರಿಜ್ವಾನಾಳನ್ನು ಮದುವೆಯಾಗಿದ್ದ ಯುಸೂಫ್ ದುಬೈಗೆ ಆಗಾಗ ಹೋಗುತ್ತಿದ್ದ ಮತ್ತು ಬೆಂಗಳೂರಿಗೆ ಬಂದಾಗಲೆಲ್ಲ ಹೆಂಡತಿಯನ್ನು ಕೋಣೆಯಲ್ಲಿಯೇ ಕೂಡಿಡುತ್ತಿದ್ದ. ಈಗ ಯುಸೂಫ್ ಪೊಲೀಸ್ ಅತಿಥಿ. [ಓದಿ : ಕೊಲೆಯೊಂದೇ ಮಾರ್ಗವಲ್ಲ]
ವರದಕ್ಷಿಣೆ ಪಿಡುಗಿಗೆ ಬಲಿ : ಮತ್ತೊಂದು ಘಟನೆಯಲ್ಲಿ ನಗರದ ಸುಬ್ರಮಣ್ಯ ನಗರದಲ್ಲಿ ವರದಕ್ಷಿಣೆ ಕಿರುಕುಳ ತಾಳಲಾರದೆ ಚಿಕ್ಕಮಗಳೂರು ಮೂಲದ ಆಶಾ ಸಿಂಗ್ ಎಂಬಾಕೆ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ಶರಣಾಗುವ ಮುನ್ನ ಮರಣ ಪತ್ರ ಬರೆದಿಟ್ಟಿದ್ದು, ತನ್ನ ಸಾವಿಗೆ ಗಂಡ ಮತ್ತು ಮನೆಯವರ ಹಣದ ದುರಾಸೆಯೇ ಕಾರಣ ಎಂದು ಹೇಳಿದ್ದಾಳೆ.
ಮನಕಲಕುವ ವಿಷಯವೇನೆಂದರೆ, ಸಾಯುವ ಮುನ್ನ 1.5 ವರ್ಷ ವಯಸ್ಸಿನ ಪುಟ್ಟ ಮಗಳು ಚೈತನ್ಯಾಳನ್ನು ಸಾಯಿಸಲು ಮನಸಾಗದೆ ಪ್ರಾಣ ತ್ಯಜಿಸಿರುವುದಾಗಿ ಮರಣಪತ್ರದಲ್ಲಿ ಬರೆದಿದ್ದಾಳೆ ಆಶಾ. ಎರಡು ವರ್ಷದ ಹಿಂದೆ ಮದುವೆಯಾಗಿದ್ದ ಗಂಡ ಜಗದೀಶ ಮದುವೆಯಲ್ಲಿ 1.5 ಕೆಜಿ ಬಂಗಾರ ಪಡೆದಿದ್ದರೂ, ಮತ್ತೆ ಹಣ ತರುವಂತೆ ಆಶಾಳನ್ನು ಪೀಡಿಸುತ್ತಿದ್ದ. ಜಗದೀಶನನ್ನು ಸುಬ್ರಮಣ್ಯ ನಗರ ಪೊಲೀಸರು ಬಂಧಿಸಿದ್ದಾರೆ. ಮುದ್ದು ಮಾಡಿ ಬೆಳೆಸಬೇಕಾದ ತಾಯಿಯನ್ನು ಕಳೆದುಕೊಂಡ ಚೈತನ್ಯ ಅನಾಥಳಾಗಿದ್ದಾಳೆ.