ಎಂಡೋಸಲ್ಫಾನ್ ನಿಷೇಧ : ಎರಡು ದಿನದಲ್ಲಿ ಸುಗ್ರೀವಾಜ್ಞೆ
ಶುಕ್ರವಾರ ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಯಡಿಯೂರಪ್ಪನವರು ಎಂಡೋಸಲ್ಫಾನ್ ನಿಷೇಧಿಸಲು ಬೆಂಬಲ ಕೋರಿ ಕೇರಳ ಮುಖ್ಯಮಂತ್ರಿ ವಿಎಸ್ ಅಚ್ಯುತಾನಂದನ್ ಅವರು ಬರೆದಿದ್ದ ಪತ್ರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದರು. ಜನರನ್ನು ಇದ್ದರೂ ಸತ್ತಂತೆ ಮಾಡುತ್ತಿರುವ ಎಂಡೋಸಲ್ಫಾನ್ ನಿಷೇಧಕ್ಕೆ ಕೇಂದ್ರ ಹಿಂದೆಮುಂದೆ ನೋಡುತ್ತಿದೆ ಎಂದು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದರು.
ಕಳೆದ ತಿಂಗಳು ಜಿನೀವಾದಲ್ಲಿ ನಡೆದ ಶೃಂಗಸಭೆಯಲ್ಲಿ ಎಂಡೋಸಲ್ಫಾನ್ ನಿಷೇಧದ ಬಗ್ಗೆ ಜಾಗತಿಕ ಚರ್ಚೆ ನಡೆದಿತ್ತು. ಅಲ್ಲಿ ಈ ಕೀಟನಾಶಕ ನಿಷೇಧಕ್ಕೆ ಭಾರತ ಹಿಂದೇಟೆ ಹಾಕಿದ್ದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಕೇಂದ್ರ ಹೆಚ್ಚು ಸಮಯ ವ್ಯಯಿಸದೆ ಎಂಡೋಸಲ್ಫಾನ್ ದೇಶದಾದ್ಯಂತ ನಿಷೇಧಿಸಬೇಕು ಎಂದು ಆಗ್ರಹಿಸಿದ್ದರು.
ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಎಂಬಲ್ಲಿ ಎಂಡೋಸಲ್ಫಾನ್ ಬಳಕೆಯಿಂದ ರೈತ ಕುಟುಂಬದವರು ಅಕ್ಷರಶಃ ನರಕದಲ್ಲಿ ಜೀವಿಸುವಂತಾಗಿದೆ. ಎಂಡೋಸಲ್ಫಾನ್ ಮಾಡುತ್ತಿರುವ ಸರ್ವನಾಶದ ಕುರಿತು ದಟ್ಸ್ ಕನ್ನಡ ಕೆಲ ವರ್ಷಗಳ ಹಿಂದೆ ಒಂದು ಲೇಖನವನ್ನೂ ಪ್ರಕಟಿಸಿತ್ತು. ಕೊಕ್ಕಡದಲ್ಲಿ ಈ ಕೀಟನಾಶಕ ಸಿಂಪಡನೆಯಿಂದಾಗಿ ಜನಸಾಮಾನ್ಯರು ಹುಟ್ಟಾ ಅಂಗವಿಕಲರಾಗುತ್ತಿದ್ದು, ದಯನೀಯವಾಗಿ ಜೀವನ ಸಾಗಿಸುತ್ತಿದ್ದಾರೆ.