ಮುಂದುವರೆದ ಪೈಲಟ್ ಮುಷ್ಕರ: ಪ್ರಯಾಣಿಕರು ತತ್ತರ

ಬೆಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಮ್ಮ ಟಿಕೇಟ್ ಸ್ಟೇಟಸ್ ಕುರಿತು ಮಾಹಿತಿ ಪಡೆಯಲು ಹಲವಾರು ಪ್ರಯಾಣಿಕರು ಸಾಲಾಗಿ ನಿಂತಿರುವುದು ಕಂಡು ಬಂದಿದೆ. ರಜಾ ಕಾಲದಲ್ಲಿ ಪ್ರವಾಸ ಹೊರಟ ಪ್ರಯಾಣಿಕರಂತೂ ಹೆಚ್ಚಿನ ವಿಮಾನಗಳು ಹಾರಾಟ ನಡೆಸುತ್ತಿಲ್ಲ ಎಂಬ ಸುದ್ದಿಯಿಂದ ಭ್ರಮನಿರಸನಗೊಂಡಿದ್ದಾರೆ. ಬೆಂಗಳೂರಿನಲ್ಲಿ ಕೆಲವರು ವಿಮಾನ ಟಿಕೇಟ್ ಕ್ಯಾನ್ಸಲ್ ಮಾಡಿ ಖಾಸಗಿ ವಿಮಾನ ಕಂಪನಿಗಳ ಮೊರೆ ಹೋಗುತ್ತಿದ್ದಾರೆ.
ಪೈಲೆಟ್ ಗಳ ಮುಷ್ಕರದಿಂದ ಏರ್ ಇಂಡಿಯಾಕ್ಕೆ ಸುಮಾರು 26.5 ಕೋಟಿ ರೂ. ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ. ನಿನ್ನೆ ಸಂಜೆ 5 ಗಂಟೆಗೂ ಮುನ್ನ ಪೈಲೆಟ್ ಗಳು ಕೆಲಸಕ್ಕೆ ಮರಳದಿದ್ದರೆ ಕಠಿಣ ಕ್ರಮಕೈಗೊಳ್ಳಲಾಗುವುದೆಂದು ನಾಗರಿಕ ವೈಮಾನಿಕ ಸಚಿವಾಲಯ ಹೇಳಿತ್ತು. ಮುಷ್ಕರ ಕೊನೆಗೊಳಿಸುವಂತೆ ನ್ಯಾಯಾಲಯದ ಆಜ್ಞೆಯನ್ನು ತಿರಸ್ಕರಿಸಿರುವ ಕುರಿತು ದೆಹಲಿ ಹೈಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ. ಆರೋಪ ಸಾಬೀತಾದಲ್ಲಿ ಪೈಲೆಟ್ ಗಳಿಗೆ ಸುಮಾರು 6 ತಿಂಗಳ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯಿದೆ.
"ನಾವೆಲ್ಲರೂ ಅಂದರೆ ಸುಮಾರು 31 ಸಾವಿರ ಏರ್ ಇಂಡಿಯಾ ಉದ್ಯೋಗಿಗಳು ಜೈಲಿಗೆ ಹೋಗಲು ಸಿದ್ಧರಿದ್ದೇವೆ. ಯಾಕೆಂದರೆ ನಾವು ಈ ವಿಷಯದ ಕುರಿತು ಸಾಕಷ್ಟು ಗಂಭೀರವಾಗಿದ್ದೇವೆ" ಎಂದು ಮುಷ್ಕರ ನಿರತ ಪೈಲೆಟೊಬ್ಬರು ಹೇಳಿದ್ದಾರೆ. ವೇತನ ತಾರತಮ್ಯ ವಿಷಯವನ್ನು ಪ್ರಧಾನ ಬೇಡಿಕೆಯಾಗಿಸಿಕೊಂಡು ಪೈಲಟ್ ಗಳು ಮುಷ್ಕರ ನಡೆಸುತ್ತಿದ್ದಾರೆ. ಈ ಮಧ್ಯೆ, ಮುಷ್ಕರವನ್ನು ಕಾನೂನುಬಾಹಿರ ಎಂದು ಸಾರಿದ್ದು, ಭಾರತೀಯ ವಾಣಿಜ್ಯ ಪೈಲೆಟ್ ಒಕ್ಕೂಟಕ್ಕೆ(ಐಸಿಪಿಎ) ನೀಡಿದ್ದ ಮನ್ನಣೆಯನ್ನು ಅನೂರ್ಜಿತಗೊಳಿಸಿತ್ತು.











Click it and Unblock the Notifications