ನಿತ್ಯಾನಂದನಿಗೆ ಮಹಿಳೆಯರಿಂದ ಅಕ್ಷರಶಃ ಮಂಗಳಾರತಿ

ಸೆಕ್ಸ್ ಸ್ಕ್ಯಾಂಡಲ್ ಪೀಡಿತನಾಗಿ ಜನಸಮೂಹದಿಂದ ದೂರವಾಗಿ ಒಂಟಿಯಾಗಿದ್ದ ನಿತ್ಯಾನಂದ ಸಾಯಿಬಾಬಾ ದರ್ಶನಕ್ಕೆಂದು ಬಿಡದಿಯಿಂದ ಮಂಗಳವಾರ ಇಲ್ಲಿಗೆ ಬಂದೇ ಬಿಟ್ಟಿದ್ದ. 'ಅಪ್ಪಾ ಸಾಯಿಬಾಬಾ, ನಾನು ನೀನು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇಬ್ಬರೂ ಅವತಾರ ಪುರುಷರೇ' ಎಂದು ಬಗೆದ ನಿತ್ಯಾನಂದ ಕುಲ್ವಂತ್ ಹಾಲಿನೊಳಕ್ಕೆ ಕಳ್ಳಹೆಜ್ಜೆ ಇಟ್ಟಿದ್ದ. (ಗ್ಯಾಲರಿ)
ಆದರೆ ಅಲ್ಲಿದ್ದ ಮಹಿಳೆಯರು (ಇವರಲ್ಲಿ ಬಹುತೇಕ ಮಹಿಳೆಯರು ಬಾಬಾ ಕುಟುಂಬದವರು) ಇವನನ್ನು ಒಳ ಬಿಟ್ಟುಕೊಳ್ಳಲು ಸುತರಾಂ ಒಪ್ಪಲೇ ಇಲ್ಲ. ಛೀ ಹಚ್ಚಾ ಎನ್ನತೊಡಗಿದರು. ಗಾಬರಿಗೆ ಬಿದ್ದ ಬಿಡದಿ ಸ್ವಾಮಿ 'ಅಮ್ಮಾ, ತಾಯಿ ನಾನಂತವನಲ್ಲ' ಎಂದು ಬಡಬಡಿಸತೊಡಗಿದ. ಮಹಿಳೆಯರ ಜತೆಗೆ ಗಣ್ಯಾತಿಗಣ್ಯರ ಗೇಟಿನಲ್ಲಿದ್ದ ಬಾಬಾ ಸ್ವಯಂಸೇವಕರೂ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಪಕ್ಕದಲ್ಲೇ ಇದ್ದ ವಿಹಿಂಪ ಮುಖ್ಯಸ್ಥ ಆಶೋಕ್ ಸಿಂಘಾಲ್ ನತ್ತ ಕಳ್ಳನೋಟ ಬೀರಿ 'ಗುರುಗಳೇ, ನನ್ನನ್ನು ಪಾರು ಮಾಡಿ' ಎಂದ.
ಆಗ ಸ್ವತಃ ಅಶೋಕ ಮಹಾರಾಜರು 'ಇವ ನಮ್ಮವ ತಂಗಿ, ತಗಿ, ದಾರಿ ಬಿಡು' ಎಂದು ಗದರಿಕೊಂಡರು. ಉಹು: ನಿಮ್ಮ ಮಾಯೆ ಏನಿದ್ದರೂ ಬಿಡದಿಯಲ್ಲಿರಲಿ. ಇಲ್ಲೆಲ್ಲ ನಡೆಯೋಲ್ಲ ಎಂದು ಕಡ್ಡಿಮುರಿದಂತೆ ನಿತ್ಯಾನಂದನನ್ನು ಇನ್ನಷ್ಟು ಹಿಂದಕ್ಕೆ ತಳ್ಳಿದರು. ಗತ್ಯಂತರವಿಲ್ಲದೆ ಪೊಲೀಸರು ಮಧ್ಯೆ ಪ್ರವೇಶಿಸಿ, 'ಸ್ವಾಮಿ ನಿತ್ಯಾನಂದು ಇಲ್ಲೆಲ್ಲ ಗಲಾಟೆ ಮಾಡಬೇಡಪ್ಪ. ಸೀದಾ ಹೊರಕ್ಕೆ ಬಾ' ಎಂದು ಸೂಚಿಸಿದರು. ಇನ್ನೇನು ಹೊರಗೆ ತಳ್ಳಿಸಿಕೊಳ್ಳಬೇಕು ಎನ್ನುತ್ತಿರುವಾಗ ಅದೇ ಕ್ಷಣಕ್ಕೆ ಸರಿಯಾಗಿ ಸೇವಾ ದಳದ ಹಿರಿಯರೊಬ್ಬರು 'ಹೋಗ್ಲಿ ಬಿಡ್ರಪ್ಪಾ, ಅವನನ್ನ' ಎಂದು ಸಂಕಷ್ಟ ಕಾಲದಲ್ಲಿ ನಿತ್ಯಾನಂದನ ಕೈಹಿಡಿದರು.
ಮುಂದ, ಬಾಬಾ ಪಾರ್ಥಿವಶರೀರದ ಪಕ್ಕ ನಿಂತೇ ತನ್ನ ಅಂತಿಮ ನಮನ ಸಲ್ಲಿಸಿ, ಬದುಕಿದೆಯಾ ಬಡಜೀವವೇ ಎಂದು ಅಲ್ಲಿಂದ ಕಾಲ್ಕಿತ್ತ ಎಂಬಲ್ಲಿಗೆ ನಿತ್ಯಾನಂದ ಪುರಾಣ ಮುಗಿಯಿತು. ಮರೆತ ಮಾತು: ನಿತ್ಯಾನಂದನ ಎಡಬಲದಂತಿರುವ ಸಚ್ಚಿದಾನಂದ ಮತ್ತು ಸದಾನಂದ ಮಾತ್ರ ಇಡೀ ಪ್ರಹಸನದಿಂದ ಶ್ಯಾನೆ ದುಃಖಿತರಾಗಿದ್ದು ಟಿವಿಗಳಲ್ಲಿ ಎದ್ದುಕಾಣುತ್ತಿತ್ತು.











Click it and Unblock the Notifications