ದುರಂತ ಸಾವಿಗೀಡಾದ ಲೆ.ಕ. ವಿಶ್ರಾಂತ್ ಅಂತ್ಯಕ್ರಿಯೆ
ಭಾರತ-ಚೀನಾ ಗಡಿಯಲ್ಲಿರುವ ಉತ್ತರ ಸಿಕ್ಕಿಂನಲ್ಲಿ ಅಪಘಾತಕ್ಕೀಡಾದ ಅಡ್ವಾನ್ಸಡ್ ಲೈಟ್ ಹೆಲಿಕಾಪ್ಟರ್ ಧ್ರುವದಲ್ಲಿದ್ದ ನಾಲ್ವರು ಯೋಧರಲ್ಲಿ ವಿಶ್ರಾಂತ್ ನಂಜಪ್ಪ ಕೂಡ ಒಬ್ಬರು. ಗುರುವಾರ ಅಪಘಾತ ಸಂಭವಿಸಿತ್ತು. ಯುಮಿಸಮಡಾಂಗ್ ಎಂಬ ಪ್ರದೇಶದಲ್ಲಿ ಶಿವ ದೇವಸ್ಥಾನದ ಬಳಿ ಶುಕ್ರವಾರ ಪತ್ತೆಯಾಗಿತ್ತು. ಅಪಘಾತವಾದ ಸ್ಥಳದಲ್ಲಿ ಇಬ್ಬರು ಪೈಲಟ್ ಮತ್ತು ಇಬ್ಬರು ಸೈನಿಕರ ದೇಹಗಳು ದೊರೆತಿದ್ದವು.
ದಟ್ಟ ಅರಣ್ಯವಿರುವ ಯುಮಿಸಮಡಾಂಗ್ ಪ್ರದೇಶದಲ್ಲಿ ಹಿಮ ಕೂಡ ವಿಪರೀತವಾಗಿ ಬೀಳುತ್ತಿತ್ತು. ಆ ಪ್ರದೇಶದಲ್ಲಿ 15 ಸಾವಿರ ಅಡಿಗಳ ಎತ್ತರದಲ್ಲಿ ಹೆಲಿಕಾಫ್ಟರ್ ಹಾರಾಡುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಇನ್ನೊಂದು ಧ್ರುವ ಹೆಲಿಕಾಪ್ಟರ್ ಜೊತೆ ಬೆಳಿಗ್ಗೆ 9.30ಕ್ಕೆ ಹಾರಾಟ ಪ್ರಾರಂಭಿಸಿತ್ತು. ಆದರೆ, 11.30ರ ಸುಮಾರಿಗೆ ಸಂಪರ್ಕವನ್ನು ಕಡಿದುಕೊಂಡಿತ್ತು. ಅಪಘಾತಕ್ಕೆ ನಿಖರವಾದ ಕಾರಣವೇನೆಂದು ತಿಳಿದುಬಂದಿಲ್ಲ.
ಸಿಕ್ಕಿಂನಿಂದ ತರಲಾಗುತ್ತಿದ್ದ ವಿಶ್ರಾಂತ್ ನಂಜಪ್ಪ ಅವರ ದೇಹವನ್ನು ಹೊದ್ದೂರಿನಲ್ಲಿರುವ ಚೌರಿರಾ ಐನ್ ಹೌಸ್ ನಲ್ಲಿ ಅಂತಿಮ ದರ್ಶನಕ್ಕಾಗಿ ಇಡಲಾಗುವುದೆಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ವಿಶ್ರಾಂತ್ ಅವರು ಬ್ಯಾಂಕ್ ಅಧಿಕಾರಿಯಾಗಿದ್ದ ನಾಣಯ್ಯ ಅವರ ಮಗ. ನಾಣಯ್ಯ ದಂಪತಿಗಳು ಅನೇಕ ವರ್ಷಗಳಿಂದ ಬೆಂಗಳೂರಿನ ಬಿಟಿಎಂ ಬಡಾವಣೆಯಲ್ಲಿ ವಾಸವಾಗಿದ್ದಾರೆ. ನಂಜಪ್ಪ ಅವರು ಮೆಕೆರಿರಾ ನಯನಾ ಎಂಬುವವರನ್ನು ಮದುವೆಯಾಗಿದ್ದು, ದಂಪತಿಗಳಿಗೆ 1 ವರ್ಷದ ಪುಟ್ಟ ಮಗಳಿದ್ದಾಳೆ. ನಯನಾ ಕೂಡ ಬೆಂಗಳೂರಿನಲ್ಲಿ ವೃತ್ತಿನಿರತರಾಗಿದ್ದಾರೆ.