ಮೈಸೂರಿನಲ್ಲಿ ನಕಲಿ ನರ್ಸಿಂಗ್ ಹೋಂಗಳಿಗೆ ಬೀಗ

ಮೈಸೂರಿನಲ್ಲಿ ಚಿಕಿತ್ಸೆ ನೀಡಲು ಅನರ್ಹರಾಗಿರುವಂತಹ ಕೆಲವು ನಕಲಿ ವೈದ್ಯರು ಅಲ್ಲಲ್ಲಿ ಕ್ಲಿನಿಕ್ಗಳನ್ನು ತೆರದು ಅಮಾಯಕರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ನಡುವೆ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಲ್ಯಾಬ್ ಆಪರೇಟರ್, ಕಂಪೌಂಡರ್ಗಳು ಮನೆಯಲ್ಲಿ ವೈದ್ಯರಂತೆ ಚಿಕಿತ್ಸೆ ನೀಡುವ ಮೂಲಕ ಸಾರ್ವಜನಿಕರಿಂದ ಹಣ ಕೀಳುತ್ತಿರುವ ಬಗ್ಗೆ ಈ ಹಿಂದೆ ಖಾಸಗಿ ವಾಹಿನಿಯೊಂದು ರಹಸ್ಯ ಕಾರ್ಯಾಚರಣೆ ನಡೆಸಿತ್ತು.
ನಗರದ ಗಲ್ಲಿಗಲ್ಲಿಯಲ್ಲಿ ನಕಲಿ ವೈದ್ಯರು ಕ್ಲಿನಿಕ್ ತೆರದು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರು ಜಲ್ಲಾಧಿಕಾರಿ ಹರ್ಷಗುಪ್ತಾ ಅವರ ಬಳಿಗೆ ಹೋಗಿತ್ತು. ಹೀಗಾಗಿ ನಿನ್ನೆ ಸಭೆ ನಡೆಸಿದ ಜಿಲ್ಲಾಧಿಕಾರಿಗಳು ನಗರದಲ್ಲಿರುವ ಕೆಲವು ಖಾಸಗಿ ನರ್ಸಿಂಗ್ ಹೋಂಗಳ ಮೇಲೆ ದಾಳಿ ನಡೆಸಿ ಪರಿಶೀಲಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಇಂದು ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ಹಾಗೂ ಕರ್ನಾಟಕ ಖಾಸಗಿ ವೈದ್ಯಕೀಯ ಮಂಡಳಿಯ ಸದಸ್ಯರು ದಾಳಿ ನಡೆಸಿದ್ದಾರೆ.
ಮೈಸೂರಿನ ಉದಯಗಿರಿಯ ಮಹದೇವಪುರ ರಸ್ತೆಯಲ್ಲಿರುವ ಲತಾ ನರ್ಸಿಂಗ್ ಹೋಂ, ತಿಲಕ್ ನಗರದ ಶಾಂತಿ ಕ್ಲಿನಿಕ್, ರಾಜೇಂದ್ರನಗರದಲ್ಲಿ ಡಾ.ನಾಗರಾಜ್ ಎಂಬಾತ ನಡೆಸುತ್ತಿದ್ದ ಕ್ಲಿನಿಕ್ ಹಾಗೂ ಉದಯಗಿರಿಯ ಬಯೋಟೆಕ್ ಲ್ಯಾಬ್ವೊಂದಕ್ಕೆ ದಾಳಿ ನಡೆಸಿ ಪರಿಶೀಲಿಸಿದ ಅಧಿಕಾರಿಗಳು ಸೂಕ್ತ ನಿರ್ವಹಣೆ ಇಲ್ಲದೆ ಇರುವುದು ಹಾಗೂ ಕೆಲವು ನರ್ಸಿಂಗ್ ಹೋಂಗಳಲ್ಲಿ ಸ್ತ್ರೀರೋಗ ತಜ್ಞರಲ್ಲದವರು ಹೆರಿಗೆ ಮಾಡಿಸುತ್ತಿದ್ದುದನ್ನು ಕಂಡು ಹೌಹಾರಿದರು. ಅಲ್ಲದೆ ಎರಡೇ ಕೊಠಡಿಯ ನರ್ಸಿಂಗ್ ಹೋಂನಲ್ಲಿ ಆಪರೇಷನ್ ಇನ್ನಿತರ ಎಲ್ಲಾ ಚಿಕಿತ್ಸೆಯನ್ನು ಅಲ್ಲಿಯೇ ನೀಡುತ್ತಿರುವುದನ್ನು ಕಂಡು ಆತಂಕಗೊಂಡರು. ಬಳಿಕ ನಾಲ್ಕು ನರ್ಸಿಂಗ್ ಹೋಂಗಳಿಗೆ ಬೀಗ ಮುದ್ರೆ ಹಾಕಲಾಯಿತು.












Click it and Unblock the Notifications