ಧರ್ಮೇಂದ್ರ ಕರ್ನಾಟಕ ಬಿಜೆಪಿ ಧರ್ಮನಿರ್ಣಾಯಕ
ನಾಯಕತ್ವ ಬದಲಾವಣೆಯ ಕೂಗು ದಿನೇದಿನೇ ಹೆಚ್ಚುತ್ತಿದ್ದು, ಪಕ್ಷದ ಪ್ರಮುಖರು, ಶಾಸಕರ ಅಭಿಪ್ರಾಯ ಸಂಗ್ರಹಿಸುವ ಹೊಣೆಗಾರಿಕೆಯನ್ನು ರಾಜ್ಯ ಉಸ್ತುವಾರಿ ಹೊಣೆಹೊತ್ತಿರುವ ಧರ್ಮೇಂದ್ರ ಪ್ರಧಾನ್ ಅವರಿಗೆ ಬಿಜೆಪಿ ಹೈಕಮಾಂಡ್ ವಹಿಸಿದೆ. ಒಂದು ವೇಳೆ ಯಡಿಯೂರಪ್ಪ ಅವರನ್ನು ಕೆಳಗಿಳಿಸಬೇಕಾದರೆ ಬಂಡಾಯ ಶಾಸಕರ ಸಂಖ್ಯೆ ಎಷ್ಟಿದೆ ಎಂಬುದನ್ನು ಪ್ರಧಾನ್ ಪರಿಶೀಲಿಸಲಿದ್ದಾರೆ.
ಆರೆಸ್ಸೆಸ್ ಗೆ ಬೇಡವಾದ ಬಿಎಸ್ ವೈ: ಸತತ ಹಗರಣಗಳ ಬಲೆಗೆ ಸಿಲುಕಿರುವ ಮುಖ್ಯಮಂತ್ರಿ ಅವರನ್ನು ಪಕ್ಷ ಹಾಗೂ ಸರ್ಕಾರದ ಹಿತದೃಷ್ಟಿಯಿಂದ ಪದಚ್ಯುತಗೊಳಿಸಬೇಕು ಎಂಬ ಕೂಗು ಆರೆಸ್ಸೆಸ್ ಮುಖಂಡರಿಂದಲೂ ಕೇಳಿಬಂದಿದೆ. ಆರೆಸ್ಸೆಸ್ ನ ಹಿರಿಯ ಕ್ಷೇತ್ರ ಪ್ರಚಾರಕ ಮಂಗೇಶ್ ಭೇಂಡೆ ಅವರನ್ನು ಭೇಟಿ ಮಾಡಿದ ಈಶ್ವರಪ್ಪ ಅವರು ತಮ್ಮ ಸಂಪೂರ್ಣ ಪ್ಲ್ಯಾನ್ ವಿವರಿಸಿದ್ದಾರೆ.ಯಡಿಯೂರಪ್ಪ ಅವರಂಥ ನೂರು ನಾಯಕರನ್ನು ಸೃಷ್ಟಿಸುವ ತಾಕತ್ತು ಸಂಘಕ್ಕಿದೆ. ನೀವು ಏನು ಯೋಚಿಸಬೇಡಿ, ಹಿರಿಯ ನಾಯಕರೊಡನೆ ಮಾತನಾಡುವೆ ಎಂದು ಮಂಗೇಶ್ ಭರವಸೆ ನೀಡಿದ್ದಾರೆ.
ಯಡಿಯೂರಪ್ಪ ಹಳೇ ತಂತ್ರ: ಈ ಮಧ್ಯೆ ಏಪ್ರಿಲ್ 17ರಿಂದ 19 ಸುತ್ತೂರಿನಲ್ಲಿ ನಡೆಯಲಿರುವ ವೀರಶೈವ ಸಮಾವೇಶದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಜಾತಿ ಅಸ್ತ್ರವನ್ನು ಬಳಸಬಹುದು ಎಂಬ ಆತಂಕ ಭಿನ್ನಮತೀಯ ನಾಯಕರನ್ನು ಕಾಡುತ್ತಿದೆ. ಅಲ್ಲದೆ, ಎಲ್ಲರ ಮನಕರಗುವಂತೆ ಮಾತನಾಡುವ ಕಲೆ ಹೊಂದಿರುವ ಸಿಎಂ, ಭಿನ್ನ ಶಾಸಕರನ್ನು ತಮ್ಮ ಕಡೆಗೆ ಸೆಳೆದುಕೊಳ್ಳುವ ಎಲ್ಲ ಪ್ರಯತ್ನ ನಡೆಸಿದ್ದಾರೆ. ಯಾವುದಕ್ಕೂ ಏ.20ರ ನಂತರ ಏನಾದರೂ ಬದಲಾವಣೆ ಕಾಣಬೇಕಾದರೆ ಧರ್ಮೇಂದ್ರ ಪ್ರಧಾನ್ ಅವರ ಮೊರೆ ಹೋಗಲೇಬೇಕು.