ಬಳ್ಳಾರಿ ರಸ್ತೆಯಲ್ಲಿ ಟೆಕ್ಕಿ ದುರಂತ ಸಾವು
ಸದಾಶಿವನಗರದಲ್ಲಿರುವ ಅದಿತಿ ಟೆಕ್ನಾಲಜೀಸ್ ನಲ್ಲಿ ಹೊಸದಾಗಿ ನೇಮಕಗೊಂಡಿದ್ದ ಅರವಿಂದ್ ಗೆ ಬೆಂಗಳೂರಿನಲ್ಲಿ ಮುಂದಿನ ಜೀವನ ಕಳೆಯುವ ಆಸೆಯಿತ್ತು. ಮಡದಿ ಹಾಗೂ ಮಗುವನ್ನೂ ಬೆಂಗಳೂರಿಗೆ ಕರೆಸಿಕೊಂಡು ಇಲ್ಲೇ ನೆಲೆಸುವ ಅರವಿಂದ್ ಕನಸಿಗೆ ವಿಧಿ ಬೇರೆಯದೆ ಅಂತ್ಯ ಬರೆದಿದೆ. ಯಲಹಂಕದ ಬಳಿ ಹುಣಸೇ ಮಾರನಹಳ್ಳಿ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಭಾನುವಾರ ಸಂಭವಿಸಿದ ಸರಣಿ ಅಪಘಾತದಲ್ಲಿ ಅರವಿಂದ್ ಮಿಶ್ರಾ(36) ಹಾಗೂ ಅವರ ಕಾರು ಚಾಲಕ ದಾದಾ ಪ್ರಸಾದ್ ಬಾಬು(30) ಸ್ಥಳದಲ್ಲೇ ಮೃತರಾಗಿದ್ದಾರೆ.
ಒಡಿಶಾ ಮೂಲದ ಅರವಿಂದ್ ಮಿಶ್ರಾ ಅವರ ಕಾರು ರಸ್ತೆ ವಿಭಜಕಕ್ಕೆ ಗುದ್ದಿ, ರಸ್ತೆಯ ಮತ್ತೊಂದು ಬದಿಗೆ ಬಿದ್ದಿದೆ, ಎದುರಿಗೆ ಬರುತ್ತಿದ್ದ ಸಿಮೆಂಟ್ ಮಿಕ್ಸರ್ ಲಾರಿ ನಿಯಂತ್ರಣ ತಪ್ಪಿ ಕಾರಿನ ಮೇಲೆ ಎರಗಿದೆ. ಲಾರಿ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವಾಗಿದ್ದಾನೆ. ಕಾರಿನ ಚಾಲಕನಿಗೆ ನಿದ್ದೆ ಮಂಪರಿನ ಕಾರಣದಿಂದ ಅಪಘಾತ ಸಂಭವಿಸಿರುವ ಶಂಕೆಯನ್ನು ಯಲಹಂಕ ವಿಭಾಗದ ಬೆಂಗಳೂರು ಟ್ರಾಫಿಕ್ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಹೈದರಾಬಾದಿನಲ್ಲಿ ಕೆಲಸದಲ್ಲಿದ್ದ ಅರವಿಂದ್ ಮಿಶ್ರಾ ರ ಪತ್ನಿ ನಿರುಪಮ(31) ಹಾಗೂ ಎಂಟು ತಿಂಗಳ ಗಂಡು ಮಗು ಅದ್ವೈತ್ ಅವರನ್ನು ಒಡಿಶಾದ ಸ್ವಂತ ಊರಿಗೆ ಬಿಟ್ಟು ಬಂದಿದ್ದರು. ನಂತರ ಕಾರು ಚಾಲಕನೊಂದಿಗೆ ಬೆಂಗಳೂರಿಗೆ ಪ್ರಯಾಣ ಬೆಳಸಿದ್ದರು. ಅರವಿಂದ್ ಅವರ ಮರಣೋತ್ತರ ಪರೀಕ್ಷೆಯನ್ನು ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಮಾಡಲಾಗಿದೆ. ಮೃತರ ಕುಟುಂಬಕ್ಕೆ ವಿಷಯ ತಿಳಿಸಲಾಗಿದೆ ಎಂದು ಯಲಹಂಕ ಪೊಲೀಸರು ಹೇಳಿದರು.