ಇನ್ನಾದರೂ ಪರಮಾಧಿಕಾರ ದಯಪಾಲಿಸುವಿರಾ, ಯಡಿಯೂರಪ್ಪಾಜೀ?

ಹಿರಿಯಣ್ಣ ಹಜಾರೆ ಸಮಗ್ರ ಜನ ಲೋಕಪಾಲ ಮಸೂದೆಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತಾಗ ಭ್ರಷ್ಟಾಚಾರದಿಂದ (ಯಾರ ಭ್ರಷ್ಟಾಚಾರ?) ತಮ್ಮ ಮನಸ್ಸೂ ರೋಸಿದೆ ಎಂದ ಯಡಿಯೂರಪ್ಪ, ಹಜಾರೆಗೆ ಬೇಷರತ್ತು ಬೆಂಬಲ ವ್ಯಕ್ತಪಡಿಸಿದರು. ಜನ ಲೋಕ ಪಾಲ ಮಸೂದೆ ಬಗ್ಗೆ ಯಡಿಯೂರಪ್ಪ ಅವರಿಗೆ ಎಷ್ಟೊಂದು ಆಸಕ್ತಿಯಿದೆಯೆಂದರೆ ಮಸೂದೆಯ ಕರಡು ತಿದ್ದುವ ಮುನ್ನ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನೂ ಸಮಾಲೋಚನೆಗೆ ಕರೆಯಿರಿ ಎಂದು ಪ್ರಧಾನಿಗೆ ದುಂಬಾಲು ಬಿದ್ದರು. ಆದರೆ ಅದೇನೊ ಕೆಲಸದ ಮೇಲೆ ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು 'ಸ್ವಲ್ಪ ಸುಮ್ನೆ ಕುಳಿತುಕೊಳ್ರಿ. ನಿಮಗ್ಯಾವ ನೈತಿಕತೆ ಇದೆ' ಎಂದು ಯಡಿಯೂರಪ್ಪಗೆ ಗದರಿಸಿದರು.
ಅದಕ್ಕೂ ಮುನ್ನ ಏನಾಯಿತೆಂದರೆ, 'ಯಡಿಯೂರಪ್ಪನವರೇ ಜನ ಲೋಕಪಾಲ ಮಸೂದೆ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ. ಅದು ಕೇಂದ್ರ ಸರಕಾರದ ಕೆಲಸ. ನಿಮಗೇನಾದರೂ ಭ್ರಷ್ಟಾಚಾರದ ವಿರುದ್ಧ ನಿಜವಾದ ಕಾಳಜಿ ಇದ್ದರೆ ಮೊದಲು ಲೋಕಾಯುಕ್ತಗೆ ಹೆಚ್ಚಿನ ಬಲ ಕೊಡುವ ಯುಕ್ತ ನಿರ್ಧಾರ ತೆಗೆದುಕೊಂಡು ನಾಡಿನ ಜನರಿಂದ ಷಹಬ್ಬಾಸ್ ಪಡೆಯಿರಿ' ಎಂದು ಕರ್ನಾಟಕದ ಗಾಂಧಿಗಳು ಕಳಕಳಿ ವ್ಯಕ್ತಪಡಿಸಿದ್ದಾರೆ.
ಲೋಕಾಯುಕ್ತ ಹೆಗಡೆ ಅವರ ಅಧಿಕಾರಾವಧಿ ಇನ್ನು ಕೇವಲ ಮೂರು ತಿಂಗಳಿದೆ. ಅವರು ದಾಖಲಿಸಿಕೊಂಡಿರುವ ಪ್ರಕರಣಗಳ ವಿಚಾರಣೆ ಮುಗಿಯುವವರೆಗಾದರೂ ಅವರನ್ನು ಮುಂದುವರಿಸಬೇಕು ಎಂದು ನಾಡಿನ ಜನತೆ ಆಗ್ರಹಿಸಿದ್ದಾರೆ. ಈ ಮಧ್ಯೆ, ಭ್ರಷ್ಟಾಚಾರದ ವಿರುದ್ಧ ಹೋರಾಡುವ ಮಾತು ಕೇಳಿಬಂದಾಗ ಇಂದಿಗೂ ಬಿಸಿ ರಕ್ತದ ಯುವಕನಂತೆ ಪುಟಿದೇಳುವ ನ್ಯಾಯಮೂರ್ತಿ ಹೆಗಡೆ ಅವರು 'ಸಂತೋಷ'ವಾಗಿ (ಹೆಸರಿಗೆ ತಕ್ಕಂತೆ ಮತ್ತು ಆನಂದದಿಂದ) ಎರಡೂ ಕಡೆ ಕಾರ್ಯ ನಿಭಾಯಿಸುವುದಾಗಿ ಘೋಷಿಸಿದ್ದಾರೆ. ಜನ ಲೋಕಪಾಲ ಮಸೂದೆ ಕರಡು ರಚಿಸುವ ಸಮಿತಿಗೆ ಸದಸ್ಯನಾಗಿರುವುದರಿಂದ ತಾವು ಈಗ ನಿರ್ವಹಿಸುತ್ತಿರುವ ಲೋಕಾಯುಕ್ತ ನ್ಯಾಯಮೂರ್ತಿ ಸ್ಥಾನಕ್ಕೆ ರಾಜಿನಾಮೆ ನೀಡುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications