ಯಡಿಯೂರಪ್ಪ ಹೊಸ ಪಕ್ಷಕ್ಕೆ ಖೇಣಿ ಹಣ?

ಯಡಿಯೂರಪ್ಪ ಅವರಿಂದ ಹೊಸಪಕ್ಷ ಎಂಬ ಸುದ್ದಿ ಸತ್ಯಕ್ಕೆ ದೂರ ಎಂದು ಸಾಬೀತಾದರೂ, ಯಡಿಯೂರಪ್ಪ ಅವರ ಆಪ್ತರಿಂದ ಈ ರೀತಿ ಒತ್ತಡ ಬಂದಿರುವುದಂತೂ ನಿಜ. ಲೋಕಾಯುಕ್ತರಿಂದ ಎಫ್ ಐಆರ್ ದಾಖಲಾದರೆ, ಯಡಿಯೂರಪ್ಪ ಖಂಡಿತಾ ಕೆಳಗಿಳಿಯುತ್ತಾರೆ ಎಂಬ ಸಾಧ್ಯತೆಯಿದೆ. ಹೊಸ ಪಕ್ಷ ಸ್ಥಾಪನೆ ಸಾಧ್ಯಾಸಾಧ್ಯತೆ ಹಾಗೂ ಯಡಿಯೂರಪ್ಪ ಅವರಿಗಿರುವ ಅನಿವಾರ್ಯತೆ ಬಗ್ಗೆ ಗಮನ ಹರಿಸೋಣ.
ಮುಖ್ಯಮಂತ್ರಿ ಹುದ್ದೆಯಿಂದ ವಜಾ ಮಾಡಿದರೆ, ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷ ಕಟ್ಟಲು ಯಡಿಯೂರಪ್ಪ ಸಿದ್ಧತೆ ನಡೆಸಿದ್ದಾರೆ. ಈ ಬಗ್ಗೆ ಪಕ್ಷದ ಹೈಕಮಾಂಡ್ ಗೂ ಎಚ್ಚರಿಕೆ ಸಂದೇಶ ನೀಡಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪ ಅವರ ಪಕ್ಷಕ್ಕೆ "ಕನ್ನಡ ಮಕ್ಕಳ ಪಕ್ಷ" ಎಂಬ ಹೆಸರು ಅಂತಿಮಗೊಳ್ಳುವ ಸಾಧ್ಯತೆಯಿದೆ. ಇನ್ನೂ ಪಕ್ಷಕ್ಕೆ ಹಣ ತೊಡಗಿಸುವಂತೆ ನೈಸ್ ಸಂಸ್ಥೆ ಖೇಣಿಯವರನ್ನು ಯಡಿಯೂರಪ್ಪ ಅವರು ಕೇಳಿದ್ದಾರಂತೆ.
ಅಶೋಕ್ ಖೇಣಿ ಕೂಡಾ ಈಗಾಗಲೇ ಹೊಸ ಪಕ್ಷ ರಚನೆಗೆ ಸಂಬಂಧಿಸಿದಂತೆ ನೀಲನಕ್ಷೆ ತಯಾರಿ ನಡೆಸಿದ್ದಾರೆ. ಆದರೆ, ಖೇಣಿ ಬಳಿ ಹಣ ಬಲವಿದ್ದರೂ ರಾಜಕೀಯ ಬಲವಿಲ್ಲ. ಹಾಗಾಗಿ ಯಡಿಯೂರಪ್ಪ ಹಾಗೂ ಖೇಣಿ ಇಬ್ಬರೂ ಒಟ್ಟಿಗೆ ಈ ಭಾರಿ ಯೋಜನೆಗೆ ಮುಂದಾಗಿದ್ದಾರೆ. ಆದರೆ, ಇದೆಲ್ಲವೂ, ಹೈ ಕಮಾಂಡ್ ಯಡಿಯೂರಪ್ಪ ಅವರನ್ನು ಬಲವಂತವಾಗಿ ಕೆಳಗಿಳಿಸಿದರೆ ಮಾತ್ರ. ಆದರೆ, ಸದ್ಯಕ್ಕಂತೂ ಹೊಸ ಪಕ್ಷ, ಹೊಸ ಟಿವಿ ನೋಡುವ ಭಾಗ್ಯ ಯಡಿಯೂರಪ್ಪ ಅವರ ಅಭಿಮಾನಿಗಳಿಗೆ ಸಿಗಲಿಕ್ಕಿಲ್ಲ.
ಇಂದಲ್ಲ ನಾಳೆ ಹೊಸ ಪಕ್ಷ :ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ 50 ಸೀಟು ಗೆಲ್ಲುವುದು ಯಡಿಯೂರಪ್ಪ ಅವರ ಗುರಿ. ಭಿನ್ನಮತವಿಲ್ಲದ ಆಪ್ತರನ್ನು ಈಗಾಗಲೇ ಒಟ್ಟು ಮಾಡಿರುವ ಯಡಿಯೂರಪ್ಪ, ಅನಂತ್ ಹಾಗೂ ಶೆಟ್ಟರ್ ಸೇರಿದಂತೆ ಸರ್ಕಾರ ಉರುಳಿಸುವ ಸಂಚು ನಡೆಸಿದ ಎಲ್ಲರಿಗೂ ಸರಿಯಾದ ಡೋಸ್ ನೀಡಲು ಸಜ್ಜಾಗಿದ್ದಾರೆ.
ಒಂದು ವೇಳೆ ಯಡಿಯೂರಪ್ಪ ಅವರು ಬಿಜೆಪಿ ಒಡೆದರೆ, ರಾಜ್ಯದಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಾಗುವುದರಿಂದ ಪ್ರಭಾವಿ ಲಿಂಗಾಯತ ನಾಯಕರಾದ ಯಡಿಯೂರಪ್ಪ ಅವರ ಹೊಸ ಯೋಜನೆಗಳನ್ನು ತಡೆಹಿಡಿಯುವಲ್ಲಿ ಹೈ ಕಮಾಂಡ್ ಯಶಸ್ವಿಯಾಗಿದೆ. ಆದರೆ, ಯಡಿಯೂರಪ್ಪ ಅವರ ಮುಂದಿನ ನಡೆ ಬಗ್ಗೆ ಕಾದು ನೋಡೋಣ.












Click it and Unblock the Notifications