ಕ್ಷಮಿಸಿ, ಬೆಂಗಳೂರು ಸ್ವಚ್ಛಗೊಳ್ಳುತ್ತಿದೆ: ಬಿಬಿಎಂಪಿ

ಮೊದಲ ಹಂತದಲ್ಲಿ ರಿಚ್ಮಂಡ್ ರಸ್ತೆ, ಕಾಮರಾಜ ರಸ್ತೆ, ಹಳೆ ಮದ್ರಾಸ್ ರಸ್ತೆ, ಟ್ಯಾನರಿ ರಸ್ತೆ, ಕೆ.ಆರ್.ಪುರಂ, ರಾಮಮೂರ್ತಿನಗರದ ಭೋವಿ ಕಾಲೋನಿ, ಮಹದೇವಪುರ, ನಾಗವಾರ ಮುಖ್ಯ ರಸ್ತೆ, ಯಲಹಂಕ, ಮಲ್ಲೇಶ್ವರಂ ಸೇರಿದಂತೆ ಪಾಲಿಕೆಯ ಎಂಟು ವಿಭಾಗಗಳಲ್ಲಿನ 163 ರಸ್ತೆಗಳ ಸುಮಾರು 112 ಕಿ.ಮೀ. ಉದ್ದದಷ್ಟು ಏಕಕಾಲದಲ್ಲಿ ಸ್ಚಚ್ಛತಾಕಾರ್ಯ ನಡೆಯಲಿದೆ.
ಸುಂದರ ಬೆಂಗಳೂರಿನ ಕನಸು: ನಗರವನ್ನು ಸುಂದರಗೊಳಿಸುವ ಸಲುವಾಗಿ ಪ್ರತಿ ವಾರ್ಡ್ನ ಪ್ರಮುಖ ರಸ್ತೆಗಳಲ್ಲಿ ಚರಂಡಿ ಮತ್ತು ಕಾಲುವೆಗಳ ದುರಸ್ತಿ, ತ್ಯಾಜ್ಯ ವಿಲೇವಾರಿ, ಗುಂಡಿ ಮುಚ್ಚುವುದು ಕಾರ್ಯ ಕೈಗೊಳ್ಳಲಾಗಿದೆ. ಈ ಕಾರ್ಯದಲ್ಲಿ 264 ಟ್ರಾಕ್ಟರ್, 51 ಲಾರಿ, 5 ಜೆಸಿಬಿಗಳು ಸೇರಿದಂತೆ 4,600 ಸಿಬ್ಬಂದಿಗಳನ್ನು ಬಳಸಲಾಗಿದೆ. ರಾತ್ರಿ ವೇಳೆ ಕೆಲಸ ಮಾಡುವ ಕಾರ್ಮಿಕರಿಗೆ ಹೆಚ್ಚುವರಿ ಹಣ ನೀಡುತ್ತಿಲ್ಲ. ಈ ಕಾರ್ಯಕ್ಕೆ ಪೌರ ಕಾರ್ಮಿಕರ ಸಲಹೆ, ಒಪ್ಪಿಗೆ ಇದೆ ಎಂದು ಸಿದ್ದಯ್ಯ ಸ್ಪಷ್ಟಪಡಿಸಿದರು.
ಅನಧಿಕೃತ ಜಾಹೀರಾತಿಗೆ ಕತ್ತರಿ: ನಗರದ ಸೌಂದರ್ಯವನ್ನು ಹಾಳು ಮಾಡುವ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಲಾಗುವುದು. ಅದು ಯಾವುದೇ ಪಕ್ಷ, ಸಂಘಟನೆಯ ಫಲಕವಾದರೂ ಸರಿ ಅನುಮತಿ ಇಲ್ಲದೆ ಜಾಹೀರಾತು ಬಳಸಿದರೆ ಕಸದ ಬುಟ್ಟಿ ಸೇರಲಿದೆ. ಇದೇ ರೀತಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವ ಎಲ್ಲ ಅನಧಿಕೃತ ಫಲಕಗಳನ್ನು ಗುರುತಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದ್ದಾರೆ.
ಮರಗಳಿಗೆ ಉಸಿರಾಡಲು ಬಿಡಿ: ಇತ್ತೀಚೆಗೆ ಜಯನಗರ ಹಾಗೂ ಕೋರಮಂಗಲ ಬಡಾವಣೆಗೆ ಭೇಟಿ ನೀಡಿದ್ದ ಆಯುಕ್ತ ಸಿದ್ದಯ್ಯ, ಮರಗಳ ಸುತ್ತಾ ಸಿಮೆಂಟ್ ಕಾಂಕ್ರಿಟ್ ಮೆತ್ತಿರುವುದು. ಮರಕ್ಕೆ ಮೊಳೆ ಹೊಡೆದಿರುವುದು, ಜಾಹೀರಾತು ಫಲಕ ಹಾಕಿರುವುದನ್ನು ಕಂಡು ಕೆಂಡಾಮಂಡಲವಾದರು. ಮರದ ಕಾಂಡ, ಬೇರುಗಳಿಗೆ ಪೆಟ್ಟಾಗದಂತೆ ವೈಜ್ಞಾನಿಕ ರೀತಿಯಲ್ಲಿ ಕಾಂಕ್ರಿಟ್ ಕಟ್ಟೆ ನಿರ್ಮಿಸುವಂತೆ ಸೂಚಿಸಿದರು. ಮರಗಳ ಬುಡವನ್ನು ಕಾಂಕ್ರಿಟ್ ನಿಂದ ಮುಚ್ಚಿದರೆ ಹೇಗೆ ಉಸಿರಾಟ ಸಾಧ್ಯ. ಮರವನ್ನು ಉಳಿಸಿಕೊಳ್ಳಬೇಕಾದ್ದು ನಮ್ಮ ಕರ್ತವ್ಯ ಎಂದರು.












Click it and Unblock the Notifications