ಬಿಜೆಪಿ ಬೀಸಿದ ಬಲೆಗೆ ಬಿದ್ದ ಕೊಪ್ಪಳದ ಕರಡಿ

ಲಿಂಗಾಯತ ಸಮುದಾಯಕ್ಕೆ ಸೇರಿದ ಕರಡಿ ಸಂಗಣ್ಣ ಜೆಡಿಎಸ್ ತೊರೆದು ಬಿಜೆಪಿ ಸೇರುತ್ತಾರೆ ಎಂಬ ಬಗ್ಗೆ ಹಲ ದಿನಗಳಿಂದ ಮಾತುಗಳು ಕೇಳಿಬಂದಿತ್ತು. ಆಪರೇಷನ್ ಕಮಲದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ತಳ್ಳಿಹಾಕುತ್ತಲೇ ಬಂದಿದ್ದರು. ಅಂತಿಮವಾಗಿ, ತೆನೆಹೊತ್ತ ಮಹಿಳೆಯ ಭಾರವನ್ನು ಇಳಿಸಿಕೊಂಡಿರುವ ಕರಡಿ ಸಂಗಣ್ಣ ಕೇಸರಿ ಹೊದಿಕೆಯನ್ನು ಹೊದ್ದಿದ್ದಾರೆ.
ಮಾರ್ಚ್ 9ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಮತ್ತಿತರ ಹಿರಿಯ ನಾಯಕರ ಸಮ್ಮುಖದಲ್ಲಿ ವಿಧ್ಯುಕ್ತವಾಗಿ ಕರಡಿ ಸಂಗಣ್ಣ ಬಿಜೆಪಿ ಸೇರಲಿದ್ದಾರೆ. ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಬಿಜೆಪಿ ಸೇರುವುದು ತಮಗೆ ಅನಿವಾರ್ಯವಾಗಿತ್ತು ಎಂದು ಸಂಗಣ್ಣ ಅಭಿಪ್ರಾಯ ಪಟ್ಟಿದ್ದಾರೆ.
ಇನ್ನೂ ಮತ್ತಿತರು ಕಮಲಕ್ಕೆ : ಕರಡಿ ಸಂಗಣ್ಣ ಅವರ ಜೊತೆಗೆ ಜೆಡಿಎಸ್ ಪಕ್ಷದ ಆಳಂದದ ಶಾಸಕ ಸುಭಾಶ್ ಗುತ್ತೇದಾರ್ ಮತ್ತು ಸಿಂಧನೂರಿನ ವೆಂಕಟರಾವ್ ನಾಡಗೌಡ ಅವರು ಕೂಡ ರಾಜೀನಾಮೆ ಬಿಸಾಕಿ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಅವರಿಬ್ಬರು ಈ ಸುದ್ದಿಯನ್ನು ಅಲ್ಲಗಳೆಯುತ್ತಿದ್ದರೂ, ಬಲ್ಲ ಮೂಲಗಳ ಪ್ರಕಾರ, ಕ್ರಮೇಣ ಬಿಜೆಪಿ ತೆಕ್ಕೆಗೆ ಬರಲಿದ್ದಾರೆ.
ಮಾರ್ಚ್ 11ರಿಂದ ಮೂರು ದಿನಗಳ ಕಾಲ ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನ ಮುಗಿದ ನಂತರ ಸಂಪುಟ ವಿಸ್ತರಣೆಯಾಗಲಿದೆ ಎಂಬ ಬಗ್ಗೆ ಯಡಿಯೂರಪ್ಪ ಸುಳಿವು ನೀಡಿದ್ದಾರೆ. ಆದರೆ, ಕೆಲದಿನಗಳಲ್ಲಿ ಬಿಜೆಪಿ ಬಳಗ ಸೇರಲಿರುವ ಕರಡಿ ಸಂಗಣ್ಣ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗುವ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಲಾಗಿದೆ. ಈಗಾಗಲೆ ಚಾತಕ ಪಕ್ಷಿಯಂತೆ ಹಲವು ಮುಖಗಳು ಕಾದು ಕುಳಿತಿರುವುದರಿಂದ ಇನ್ನೂ ಕೆಲ ದಿನ ಅವರು ಕಾಯಬೇಕಾಗಿ ಬರಬಹುದು.












Click it and Unblock the Notifications