ಯಡ್ಡಿ ವಾಮಾಚಾರ ರಹಸ್ಯ ಬಹಿರಂಗ : ಎಚ್ಡಿಕೆ
ಮಂಡ್ಯ ತಾಲೂಕಿನ ಮಾರಗೌಡನ ಹಳ್ಳಿಯಲ್ಲಿ ಜೀರ್ಣೋದ್ಧಾರಗೊಂಡಿರುವ ಶ್ರೀ ಈಶ್ವರ (ಮಹಾಲಿಂಗೇಶ್ವರ) ದೇವಾಲಯ, ಅನ್ನದಾಸೋಹ ಭವನ ಹಾಗೂ ಸಾಮೂಹಿಕ ಸರಳ ವಿವಾಹ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಯಡಿಯೂರಪ್ಪರ ವಾಮಾಚಾರವನ್ನು ಸಾಕ್ಷ ಸಮೇತ ಸಾಬೀತು ಪಡಿಸುತ್ತೇನೆಂದು ಘೋಷಿಸಿದರು.
ಆರ್ ಟಿಐ ಬಳಸಿದರೆ ಎಲ್ಲಾ ಸಿಗುತ್ತೆ: ಸ್ವಜನಪಕ್ಷಪಾತ, ಭ್ರಷ್ಟಾಚಾರ ಮುಂತಾದ ಹಗರಣಗಳ ಆರೋಪದಲ್ಲಿ ಸಿಲುಕಿರುವ ಯಡಿಯೂರಪ್ಪ, ಆ ಬಗ್ಗೆ ಸ್ಪಷ್ಟಪಡಿಸದೆ ಜನರ ಗಮನ ಬೇರೆಡೆ ಸೆಳೆಯಲು ಆಸ್ತಿ ಬಹಿರಂಗದ ನಾಟಕವಾಡುತ್ತಿದ್ದಾರೆ. ಮಾಹಿತಿ ಹಕ್ಕು ಕಾಯಿದೆಯಡಿ ಎಲ್ಲರಿಗೂ ವಿವರ ದೊರೆಯುತ್ತದೆ. ಹೊಸದಾಗಿ ಏನನ್ನೂ ಸಿಎಂ ಹೇಳ ಹೊರಟಿಲ್ಲ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.
ನಮ್ಮ ಕುಟುಂಬದ ವಿಷಯಕ್ಕೆ ಬಂದರೆ ಅಷ್ಟೇ: ನನ್ನ ಹಾಗೂ ನನ್ನ ಕುಟುಂಬದವರ ಸಂಪೂರ್ಣ ಆಸ್ತಿ ವಿವರ ಲೋಕಾಯುಕ್ತರಿಗೆ ಈಗಾಗಲೇ ನೀಡಿದ್ದೇನೆ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ. ಯಾವುದೇ ತನಿಖೆಗೂ ಸಿದ್ದ ಹಾಗೂ ಬಹಿರಂಗ ಚರ್ಚೆಗೂ ಸೈ ಎಂದು ಅವರು ಸವಾಲು ಹಾಕಿದರು.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ದಿಗ್ಗಜರು ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದು ಒಳ್ಳೆ ಬೆಳೆವಣಿಗೆ. ಬಿಜೆಪಿ ಸರ್ಕಾರದ ವಿರುದ್ಧದ ಹೋರಾಟವನ್ನು ಕೇವಲ ದೇವೇಗೌಡರ ಕುಟುಂಬದ ನಡುವಿನ ಹೋರಾಟ ಎಂದು ಬಿಂಬಿಸಲು ಯತ್ನಿಸಲಾಗುತ್ತಿದೆ. ನಮ್ಮ ಹೋರಾಟ ಭ್ರಷ್ಟಾಚಾರದ ವಿರುದ್ಧವೇ ಹೊರತು ವೈಯಕ್ತಿಕವಾದುದಲ್ಲ.
ದೇವೇಗೌಡರ ಕುಟುಂಬವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ರಾಜಕೀಯವಾಗಿ ಮುಗಿಸುವ ಯತ್ನ ಮೊದಲಿಂದಲೂ ನಡೆಯುತ್ತಿದ್ದು, ಇಂತಹ ಬೆದರಿಕೆಗಳಿಗೆ ಜಗ್ಗುವುದಿಲ್ಲ ಎಂದು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.