ಬೆದರಿಕೆಗೆ ಹೆದರೋಲ್ಲ : ಶೋಭಾ ಕರಂದ್ಲಾಜೆ
ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಡುಗೆ ಅನಿಲ ವಿತರಣೆಯಲ್ಲಿ ಭಾರಿ ಅವ್ಯವಹಾರ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಇದರಿಂದ ಸರಕಾರದ ಬೊಕ್ಕಸಕ್ಕೆ ಸುಮಾರು 100 ರಿಂದ 150 ಕೋಟಿ ರುಪಾಯಿ ನಷ್ಟವುಂಟಾಗುತ್ತಿದೆ. ಇದನ್ನು ತಡೆಯುವುದೇ ನಮಗಿರುವ ಪ್ರಥಮ ಅದ್ಯತೆ. ಎಂತಹ ಶಕ್ತಿಗಳು ಎದುರಾದರೂ ಜಗ್ಗುವುದಿಲ್ಲ ಎಂದರು.
ಕಳೆದ ಕೆಲ ದಿನಗಳ ಹಿಂದೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ಅಡುಗೆ ಅನಿಲ ಸರಬರಾಜು ವಿಷಯಕ್ಕೆ ಸಂಬಂಧಿಸಿದಂತೆ ನೀವು ತೆಗೆದುಕೊಳ್ಳುತ್ತಿರುವ ಕಠಿಣ ಕ್ರಮಗಳಿಂದ ನಮಗೆ ಭಾರಿ ನಷ್ಟ ಉಂಟಾಗುತ್ತದೆ. ಈ ವಿಷಯವನ್ನು ಕೂಡಲೇ ಕೈಬಿಡದಿದ್ದರೆ ಮಹಾರಾಷ್ಟ್ರದ ಹೆಚ್ಚುವರಿ ಜಿಲ್ಲಾಧಿಕಾರಿ ಸೋನವಾನೆ ಅವರಿಗೆ ಆದ ಗತಿ ನಿಮಗೂ ಆಗುತ್ತದೆ ಎಂದು ಬೆದರಿಕೆ ಹಾಕಿದ. ಅದಕ್ಕೆ ನಾನು ಸರಿಯಪ್ಪ ಹಾಗೆ ಮಾಡು ಎಂದು ಹೇಳಿದೆ ಎಂದು ಶೋಭಾ ಕರಂದ್ಲಾಜೆ ವಿವರಿಸಿದರು.
ಕೆಲವಾರು ವರ್ಷಗಳಿಂದ ಅಡುಗೆ ಅನಿಲ ವಿತರಣೆಯಲ್ಲಿ ಭಾರಿ ಅವ್ಯವಹಾರ ನಡೆದುಕೊಂಡು ಬಂದಿದೆ. ಇದೊಂದು ದೊಡ್ಡ ಮಾಫಿಯಾ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದೆ. ಅಡುಗೆ ಅನಿಲವನ್ನು ವಾಣಿಜ್ಯ ಬಳಕೆಗಾಗಿ ದುಪ್ಪಟ್ಟು ದರಕ್ಕೆ ಮಾರಾಟ ಮಾಡಲಾಗುತ್ತದೆ. ಶೇ. 40 ರಿಂದ 50 ರಷ್ಟು ಅನಿಲ ವಾಣಿಜ್ಯ ಬಳಕೆಗೆ ಮಾರಾಟವಾಗುತ್ತಿದೆ. ಈ ಬಗ್ಗೆ ಸಾರ್ವಜನಕರಿಂದ ಮತ್ತು ಸಂಘ ಸಂಸ್ಥೆಗಳಿಂದ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಗೆ ನೂರಾರು ದೂರುಗಳು ಬಂದಿವೆ ಎಂದು ಶೋಭಾ ಹೇಳಿದರು.
ಇಂತಹ ಬೆದರಿಕೆ ಕರೆಗೆ ಹೆದರುವುದಿಲ್ಲ. ಈ ಅವ್ಯವಹಾರವನ್ನು ತಡೆಗಟ್ಟಲು ಕೈಕೊಳ್ಳಬೇಕಾದ ಕ್ರಮಗಳನ್ನು ಸರಕಾರ ತೆಗೆದುಕೊಳ್ಳತ್ತದೆ. ಇದರಲ್ಲಿ ಅನುಮಾನವೇ ಬೇಡ. ಬೆದರಿಕೆಗೆ ಕರೆ ಬಗ್ಗೆ ಮುಖ್ಯನಮಂತ್ರಿಗಳೊಂದಿಗೆ ಚರ್ಚಿಸಿ ದೂರು ದಾಖಲಿಸಲಾಗುವುದು ಎಂದು ಕರಂದ್ಲಾಜೆ ತಿಳಿಸಿದರು.