ಸುಗ್ಗಲ್ಲಮ್ಮ ಗುಡಿ ನುಂಗಿದ ರೆಡ್ಡಿಗಳ ಓಎಂಸಿ

ಸಿಬಿಐನ ಡಿಐಜಿ ಲಕ್ಷ್ಮೀನಾರಾಯಣ ಮತ್ತು ಡಿಎಸ್ಪಿ ಖಾನ್ ನೇತೃತ್ವದ ಸಿಬಿಐ ಅಧಿಕಾರಿಗಳ ತಂಡ ಹಂತ ಹಂತವಾಗಿ ಗಣಿ ಪ್ರದೇಶವನ್ನು ಪರಿಶೀಲಿಸಿದ ಸಿಬಿಐ ತಂಡ ಸುಗ್ಗಲಮ್ಮ ದೇವಸ್ಥಾನದ ಬಳಿ ಆಗಮಿಸಿದಾಗ, ಓಎಂಸಿಯ ವ್ಯವಸ್ಥಾಪಕ ನಿರ್ದೇಶಕ ಬಿ. ಶ್ರೀನಿವಾಸರೆಡ್ಡಿ ಮತ್ತು ಮೈನ್ಸ್ ಮೇನೇಜರ್ ಶಿವಕುಮಾರ್ ಅವರನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದರು.
ದೇವರು ಎಲ್ಲಿ? ಎಂದ ಅಧಿಕಾರಿ: ಸಿಬಿಐ ಅಧಿಕಾರಿ ಲಕ್ಷ್ಮೀನಾರಾಯಣ ಅವರು 'ನಾನು ದೇವರು, ದೈವೀಶಕ್ತಿಯಲ್ಲಿ ಅಪಾರ ನಂಬಿಕೆ, ಶ್ರದ್ಧೆಗಳನ್ನು ಹೊಂದಿದ್ದೇನೆ. ಸುಗ್ಗಲಮ್ಮವ್ವಳಿಗೆ ಪೂಜೆ ಸಲ್ಲಿಸಲಿಕ್ಕಾಗಿ ಇಲ್ಲಿಗೆ ಇಂದು ಆಗಮಿಸಿದ್ದೇನೆ. ದೇವಸ್ಥಾನ ಎಲ್ಲಿದೆ ತೋರಿಸಿ?" ಎಂದು ಓಎಂಸಿಯವರನ್ನು ಖಾರವಾಗಿ ಪ್ರಶ್ನಿಸಿದರು.
ಆಗ, ಉತ್ತರಿಸಿದ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸರೆಡ್ಡಿ 'ಇಲ್ಲಿ ದೇವಸ್ಥಾನವೇ ಇರಲಿಲ್ಲ" ಎಂದು ವಾದ ಮಂಡಿಸಿದರು. ಕೋಪಗೊಂಡ ಲಕ್ಷ್ಮೀನಾರಾಯಣ ಅವರು '1896ರ ನಕ್ಷೆಯಲ್ಲಿ ಸುಗ್ಗಲ್ಲಮ್ಮ ದೇವಸ್ಥಾನ ಇರುವ ಗುರುತು ಇದೆ. ಈಗ, ದೇವಸ್ಥಾನ ಇಲ್ಲ ಎಂದರೆ ಹೇಗೆ? ಯಾರು? ಹೇಗೆ ದೇವಸ್ಥಾನ ಧ್ವಂಸ ಮಾಡಿದ್ದಾರೆ?" ಎಂದು ಪ್ರಶ್ನಿಸಿದರು.
ವಿಚಲಿತರಾದ ಶ್ರೀನಿವಾಸರೆಡ್ಡಿ ಅವರು, '1896ರ ನಕ್ಷೆಯೇ ತಪ್ಪುಗಳಿಂದ ಕೂಡಿದೆ. ಈ ನಕ್ಷೆಯನ್ನು ಅಧಿಕಾರಿಗಳು ಮಾನ್ಯ ಮಾಡಬಾರದು. ಇಲ್ಲಿ ಸುಗ್ಗಲಮ್ಮ ದೇವಸ್ಥಾನವೇ ಇರಲಿಲ್ಲ" ಎಂದು ಮತ್ತೊಮ್ಮೆ ವಾದ ಮಂಡಿಸಿದರು. ಆಗ, ಸಿಬಿಐ ಮೈನ್ಸ್ ಮೇನೇಜರ್ ಶಿವಕುಮಾರ್ ಅವರನ್ನು ಕರೆದು ದೇವಸ್ಥಾನದ ಮಾಹಿತಿ ಪ್ರಶ್ನಿಸಿದಾಗ 'ಸಣ್ಣದಾದ ಗುಡಿ ಇಲ್ಲಿತ್ತು. ಗಣಿ ಚಟುವಟಿಕೆಳ ಸಂದರ್ಭದಲ್ಲಿ ಗುಡಿ ಹಾಳಾಗಿದೆ" ಎಂದರು.
ಇಷ್ಟಕ್ಕೇ ಸಮಾಧಾನಗೊಳ್ಳದ ಸಿಬಿಐ, ಗುಡಿಯನ್ನು ಧ್ವಂಸ ಮಾಡಿದ್ದು ಯಾರು? ಈ ಬಗ್ಗೆ ದೂರುಗಳು ದಾಖಲಾಗಿಲ್ಲವೇ? ಎಂದು ಮತ್ತೊಮ್ಮೆ ಪ್ರಶ್ನಿಸಿದಾಗ, ಅಲ್ಲಿದ್ದವರಲ್ಲಿ ಆಶ್ಚರ್ಯ ಮೂಡಿತ್ತು. 2004 ರಲ್ಲಿ ಗುಡಿ ಧ್ವಂಸ ಕುರಿತು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು - ಪ್ರತಿದೂರುಗಳು ದಾಖಲಾಗಿದ್ದವು.
ಹೊಸ ಸುಗ್ಗಲ್ಲಮ್ಮ: 'ನಾವೇ ಸುಗ್ಗಲ್ಲಮ್ಮ ದೇವಸ್ಥಾನ ನಿರ್ಮಿಸಿದ್ದೇವೆ" ಎಂದು ಗುಡ್ಡದ ಕೆಳಗಿನ ದೇವಸ್ಥಾನವನ್ನು ಸಿಬಿಐಗೆ ಓಎಂಸಿಯವರು ತೋರಿಸಿದಾಗ, ನೀವು ಗುಡಿಯನ್ನು ಧ್ವಂಸ ಮಾಡಿಲ್ಲ ಎನ್ನುವುದಾದಲ್ಲಿ ಹೊಸ ಗುಡಿಯನ್ನು ಏತಕ್ಕಾಗಿ ನಿರ್ಮಿಸಿದ್ದೀರಿ? ಎನ್ನುವ ಮತ್ತೊಂದು ಪ್ರಶ್ನೆ ಅವರಿಗೆ ಎದುರಾಯಿತು.
ಬಿಐಓಪಿ ಸಿಬ್ಬಂದಿಯಿಂದ ಕೂಡ ಸುಗ್ಗಲ್ಲಮ್ಮ ಗುಡಿ ಇದ್ದ ಸ್ಥಳ, ಜಿಟಿ ಸ್ಟೇಷನ್ ಇದ್ದ ಸ್ಥಳದ ಮಾಹಿತಿ ಪಡೆದ ಸಿಬಿಐ ತಂಡ, ಜಾದವ್ ಸಮಿತಿ, ಸಮ್ಮಿರೆಡ್ಡಿ ಸಮಿತಿ, ಸಿಇಸಿ ವರದಿ, ಎ.ಕೆ. ಪಾದ ಸರ್ವೆ ವರದಿಗಳ ಮಾಹಿತಿಗಳನ್ನು ಸ್ಥಳದಲ್ಲಿದ್ದ ಗಣಿ ಸಿಬ್ಬಂದಿ, ಗಣಿ ಗುತ್ತಿಗೆದಾರರಿಂದ ಪಡೆದರು.
ಅನಂತಪುರಂ ಮೈನಿಂಗ್ ಕಂಪನಿಯ ಮೇಲೆ ಕಣ್ಣು ಹಾಯಿಸಿದ ಸಿಬಿಐ, 2006ರ ಒಟ್ಟು ಉತ್ಪಾದನೆ, 2008-09 ರ ಸಾಲಿನ ಗಣಿ ಚಟುವಟಿಕೆಗಳ ಒಟ್ಟು ದಾಖಲಾತಿಗಳು, ಓಎಂಸಿಯ ವಿವಿಧ ದಾಖಲಾತಿಗಳ ವಿವರಗಳನ್ನು ಕೇಳಿ ಪಡೆದರು. ಅಲ್ಲದೇ, ಆರು ಗಣಿಗಳಲ್ಲಿ ಇರುವ ಕಬ್ಬಿಣದ ಅದಿರಿನ ಗ್ರೇಡ್ನ ಮಾಹಿತಿ ಕುರಿತು ಚರ್ಚೆ ನಡೆಸಿದರು.
ಅರಣ್ಯ ಇಲಾಖೆ, ಐಬಿಎಂ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಸಿಬಿಐಗೆ ಪೂರಕ ಮಾಹಿತಿಯನ್ನು ನೀಡುತ್ತಿತ್ತು. ಅಲ್ಲದೇ, ಸಚಿವ ಜಿ. ಜನಾರ್ದನರೆಡಿ ಮತ್ತು ಅವರ ಗಣಿ ಚಟುವಟಿಕೆಗಳ ವಿರುದ್ಧ ಹೋರಾಡುತ್ತಿರುವ ಬಳ್ಳಾರಿಯ ಮತ್ತೋರ್ವ ಗಣಿ ಗುತ್ತಿಗೆದಾರ ಟಪಾಲ್ ಗಣೇಶ್ ಕೂಡ ಸಿಬಿಐ ತಂಡವನ್ನು ಸ್ಥಳದಲ್ಲೇ ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದರು. [ಬಳ್ಳಾರಿ]











Click it and Unblock the Notifications