ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರ
ರೆಡ್ಡಿ ಸಹೋದರ ಮೇಲೆ ಕಂಡು ಬಂದಿರುವ ಗಂಭೀರ ಆರೋಪಗಳಿಂದ ಅವರನ್ನು ಸಂಪುಟದಿಂದ ಕೈಬಿಟ್ಟರೆ ಸರಕಾರಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಹಾವು ಸಾಯಬಾರದು, ಕೋಲು ಮುರಿಯಬಾರದು ಎಂದು ತೀರ್ಮಾನಕ್ಕೆ ಬಂದಿದ್ದಾರೆ. ಬಿಜೆಪಿ ಸರಕಾರಕ್ಕೆ ಅಪಾಯ ಬಂದಾಗ ಬಳ್ಳಾರಿ ರೆಡ್ಡಿ ಸಹೋದರರು ಬಚಾವ್ ಮಾಡಿದ್ದು ಸುಳ್ಳಲ್ಲ. ಇದ್ದಕ್ಕಿದ್ದಂತೆಯೇ ರೆಡ್ಡಿಗಳನ್ನು ಕೈಬಿಟ್ಟರೆ ತಮ್ಮ ಮೇಲೆ ತಾವೇ ಚಪ್ಪಡಿ ಎಳೆದುಕೊಳ್ಳುವುದು ಬೇಡ ಎನ್ನುವುದು ಯಡಿಯೂರಪ್ಪ ಅವರಿಗೆ ಗೊತ್ತಿರುವ ವಿಚಾರ.
ಅನಗತ್ಯವಾಗಿ ರೆಡ್ಡಿ ಸಹೋದರರನ್ನು ಸಂಪುಟದಿಂದ ಕೈಬಿಟ್ಟು ಸರಕಾರಕ್ಕೆ ಅಪಾಯವನ್ನು ಅಹ್ವಾನಿಸಲು ಅವರಿಗೆ ಇಷ್ಟವಿಲ್ಲ. ಹೀಗಾಗಿ ವಿರೋಧಪಕ್ಷಗಳು ಎಷ್ಟೇ ಅಬ್ಬರಿಸಿದರೂ ರೆಡ್ಡಿ ಸಹೋದರರಿಂದ ಸದ್ಯಕ್ಕೆ ರಾಜೀನಾಮೆ ಪಡೆಯದಿರಲು ತೀರ್ಮಾನಿಸಿದ್ದಾರೆ. ಸರಕಾರದ ಮೇಲೆ ಈಗಾಗಲೇ ಸಾಕಷ್ಟು ಆಪಾದನೆಗಳು ಕೇಳಿ ಬಂದಿವೆ. ಕಲಾಪ ನಡೆಯಲು ವಿರೋಧ ಪಕ್ಷಗಳು ಬಿಡುತ್ತಿಲ್ಲ. ಈ ಸಂದರ್ಭದಲ್ಲಿ ಗಡಿ ಒತ್ತುವರಿ ಮಾಡಿಕೊಂಡ ಆರೋಪ ರೆಡ್ಡಿಗಳ ಮೇಲೆ ಆರೋಪ ಬಂದಿದೆ.
ಸಿಇಸಿ ವರದಿಯನ್ನು ಅಧಿಕಾರಿಗಳು ಸುಪ್ರೀಂಕೋರ್ಟ್ ನೀಡಿದ್ದಾರೆ. ಸಿಇಸಿ ವರದಿ ವಿರೋಧಿಸಿ ರೆಡ್ಡಿಗಳು ಮೇಲ್ಮನವಿ ಸಲ್ಲಿಸಲಿದ್ದಾರೆ. ಒಂದು ವೇಳೆ ಸುಪ್ರೀಂಕೋರ್ಟ್ ಮೇಲ್ಮನವಿಯನ್ನು ತಿರಸ್ಕರಿಸಿದರೆ, ರೆಡ್ಡಿಗಳನ್ನು ಸಂಪುಟದಿಂದ ಕೈಬಿಡಲು ಹೈಕಮಾಂಡ್ ಗೆ ಮನವಿ ಮಾಡಿಕೊಳ್ಳುವ ಸಾಧ್ಯತೆ ಇದೆ.