ಜಂಟಿ ಅಧಿವೇಶನಕ್ಕೆ ರಾಜ್ಯಪಾಲರಿಗೆ ಆಹ್ವಾನ

ಬಳ್ಳಾರಿ ರೆಡ್ಡಿ ಸಹೋದರರ ಗಣಿ ಹಗರಣ ಹಾಗೂ ಮುಖ್ಯಮಂತ್ರಿ ಸೇರಿದಂತೆ ಸರಕಾರದ ಮಂತ್ರಿಗಳ ಭೂಹಗರಣ ಮತ್ತು ಸ್ವಜನಪಕ್ಷಪಾತಕ್ಕೆ ಸಂಬಂಧಿದಂತೆ ಸಮಗ್ರ ವರದಿಯನ್ನು ನೀಡುವಂತೆ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಸರಕಾರಕ್ಕೆ ಎರಡು ಬಾರಿ ಪತ್ರ ಬರೆದಿದ್ದರು. ರಾಜ್ಯಪಾಲರ ಪತ್ರವನ್ನು ನಿರ್ಲಕ್ಷಿಸಿದ್ದ ಮುಖ್ಯಮಂತ್ರಿಗಳ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ರಾಜ್ಯಪಾಲರು, ಎರಡನೇ ಬಾರಿಗೆ ಪತ್ರ ಬರೆದಿದ್ದರು.
ಸರಕಾರ ನೀಡಿದ್ದ ಪತ್ರಕ್ಕೆ ತೃಪ್ತಿಗೊಳ್ಳದ ರಾಜ್ಯಪಾಲರ ಈ ಕುರಿತು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದರು. ರಾಜ್ಯಪಾಲರ ಈ ಕ್ರಮ ಸರಕಾರದ ಆಕ್ರೋಶಕ್ಕೆ ಕಾರಣವಾಗಿತ್ತು. ರಾಜ್ಯಪಾಲರು ಕಾಂಗ್ರೆಸ್ ಏಜೆಂಟ್ ರಂತೆ ವರ್ತಿಸುತ್ತಿದ್ದಾರೆ. ಈ ಕುರಿತು ರಾಷ್ಟ್ರಪತಿ ಅವರಿಗೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದ್ದರು. ಬಿಜೆಪಿ ರಾಜ್ಯಾದ್ಯಕ್ಷ ಕೆ ಎಸ್ ಈಶ್ವರಪ್ಪ ಅವರಂತೂ ರಾಜ್ಯಪಾಲರ ಮೇಲೆ ಅಕ್ಷರಶಃ ಸವಾರಿ ಮಾಡಿದ್ದರು.
ರಾಜ್ಯಪಾಲರು ಪೂರ್ವಶ್ರಮದ ಅನ್ನದ ಋಣವನ್ನು ಮರೆತಿಲ್ಲ. ಹೀಗಾಗಿ ಅವರು ಪ್ರತಿಪಕ್ಷದ ನಾಯಕರಂತೆ ವರ್ತಿಸುತ್ತಿದ್ದಾರೆ. ರಾಜ್ಯಪಾಲ ಸ್ಥಾನಕ್ಕೆ ರಾಜೀನಾಮೆ ನೀಡಿ ಜಿಲ್ಲಾ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಲಿ ಎಂದು ಲೇವಡಿ ಮಾಡಿದ್ದರು. ಹೀಗೆ ಸರಕಾರ ಮತ್ತು ರಾಜ್ಯಪಾಲರ ನಡುವೆ ಮಾತಿನ ಚಕಮಕಿ ಮುಂದುವರಿದೆ ಇತ್ತು.
ಸರಕಾರ ಮತ್ತು ರಾಜ್ಯಪಾಲರ ನಡುವೆ ನಡೆದಿದ್ದ ಮುಸುಕಿನ ಗುದ್ದಾಟವನ್ನು ಪ್ರತಿಪಕ್ಷಗಳು ದಾಳವಾಗಿ ಪ್ರಯೋಗಿಸತೊಡಗಿದ್ದವು. ಇದನ್ನು ಅರಿತ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯಪಾಲರೊಂದಿಗಿನ ಸಂಘರ್ಷವನ್ನು ಕೊನೆಗಾಣಿಸಲು ಇಂದು ರಾಜಭವನಕ್ಕೆ ಭೇಟಿ ಮಾಡಿ ಜಂಟಿ ಅಧಿವೇಶನಕ್ಕೆ ಆಹ್ವಾನಿಸುವುದರೊಂದಿಗೆ ತಿಕ್ಕಾಟಕ್ಕೆ ತಾತ್ಕಾಲಿಕ ಬ್ರೇಕ್ ನೀಡಿದ್ದಾರೆ.












Click it and Unblock the Notifications