ಚಿಕನ್ ಫಿಶ್ ಓಕೆ, ತರಕಾರಿ ಯಾಕೆ?
ಬೆಂಗಳೂರಿನಲ್ಲಿ ಮಧ್ಯಮ ಗಾತ್ರದ ಈರುಳ್ಳಿ ಬೆಲೆ ಎಪ್ಪತ್ತೈದರಿಂದ ಎಂಬತ್ತು ರೂಪಾಯಿ ಆದರೆ ಉತ್ತರ ಕರ್ನಾಟಕದಲ್ಲೂ ಧಾರಣೆ ಏನೂ ಕಮ್ಮಿಯಿಲ್ಲ. ಮಾರುಕಟ್ಟೆಯಲ್ಲಿ ಎಪ್ಪತ್ತು ರುಪಾಯಿಗೆ ಕೊಳೆತ ಈರುಳ್ಳಿಯೂ ಸಿಗುವುದಿಲ್ಲ. ವಾರದ ಹಿಂದೆ ಇಪ್ಪತ್ತೈದು ರುಪಾಯಿ ದಾಟದ ಈರುಳ್ಳಿ ಬೆಲೆ ಈಗ ಅದೇ ಮೊತ್ತಕ್ಕೆ ಐದೋ ಆರೋ ಎಣಿಕೆ ಮಾಡಿಕೊಂಡು ತೆಗೆದುಕೊಂಡು ಹೋಗುವ ಪರಿಸ್ಥಿತಿಯಿದೆ. ಅಡುಗೆಗೆ ಈರುಳ್ಳಿ ಬೇಕೇ ಬೇಕೆನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಬೆಲೆಗಳು ಇದೇ ರೀತಿ ಗಗನಕ್ಕೇರಿದರೆ ಗೃಹಿಣಿಯರು ತಿಳಿಸಾರು, ಹಸಿ ಗೊಜ್ಜು, ಕಡಲೇಬೇಳೆ ಚಟ್ನಿ ಟಾಪ್ ಆಹಾರಕ್ಕೆ ಮೊರೆ ಹೋಗಬೇಕಾಗುತ್ತದೆ. ಕರಾವಳಿ ಮನೆಗಳಲ್ಲಾದರೆ ಯಾವುದೋ ಒಂದು ಸೊಪ್ಪಿನ ಬೇರಿನ ತಂಬುಳಿ ಮಾಡಿ ಜೀವನ ಸಾಗಿಸಬಹುದು. ಆದರೆ, ನೋಡುವುದಕ್ಕೂ ಹಸುರು ಕಣದ ಬಯಲು ಸೀಮೆ ಮಂದಿಗೆ ಈರುಳ್ಳಿ ಇಲ್ಲದಿದ್ದರೆ ದಿಕ್ಕೇ ತೋಚುವುದಿಲ್ಲ.
ಜಲ್ ಚಂಡಮಾರುತದಿಂದ ರಾಜ್ಯದ ವಿವಿಧೆಡೆ ಅಕಾಲಿಕ ಮಳೆ ಸುರಿದಿದ್ದೆ ಈರುಳ್ಳಿ ಬೆಲೆ ಈ ಪಾಟಿ ಗಗನಕ್ಕೆರಲು ಪ್ರಮುಖ ಕಾರಣಾಂತ ನಿನ್ನೆ ಟಿವಿಗಳಲ್ಲಿ ಹೇಳ್ತಾನೇ ಇದ್ರು. ಮೇ ಅಥವಾ ಜೂನ್ ತಿಂಗಳಲ್ಲಿ ನಾಟಿ ಮಾಡಿದ ಈರುಳ್ಳಿ ನವೆಂಬರ್ ಅಂತ್ಯದಲ್ಲಿ ಕೊಯ್ಲಿಗೆ ಬರುತ್ತದಂತೆ. ಆದರೆ ಮಳೆಯಿಂದ ಬಹುಪಾಲು ಫಸಲು ನೀರು ಪಾಲಾಗಿದೆಯಂತೆ. ಹಾಗಾಗಿ ಅರೆಬರೆ ಫಸಲಿಗೆ ಭಾರೀ ಬೇಡಿಕೆ ಉಂಟಾಗಿದೆಯಂತೆ. ಈರುಳ್ಳಿ ಪ್ರಮುಖವಾಗಿ ಬೆಳೆಯುವ ಮಹಾರಾಷ್ಟ್ರ ರಾಜ್ಯದಲ್ಲೂ ಇದೇ ಪರಿಸ್ಥಿತಿಯಂತೆ. ಈರುಳ್ಳಿ ಜೊತೆ ಇತರ ತರಕಾರಿಗಳ ಬೆಲೆ ಗಗನಕ್ಕೇರಿದ್ದು ಕಳವಳ ತರುವ ವಿಚಾರವಂತೆ. ಬೆಳ್ಳುಳ್ಳಿ ಬೆಲೆ 300 ರೂಪಾಯಿ, ಟೊಮ್ಯಾಟೋ 30, ಕ್ಯಾರೆಟ್ 55, ಬದನೇಕಾಯಿ 30, ಬೀನ್ಸ್ 60, ಶುಂಠಿ 225 ರೂಪಾಯಿ ಹೆಚ್ಚುಕಮ್ಮಿ ಇಂದಿನ ಮಾರುಕಟ್ಟೆ ಬೆಲೆಗಳಂತೆ.
ಕೆಜಿಯೊಂದಕ್ಕೆ ಇಂತಹ ದುಬಾರಿ ಬೆಲೆತೆತ್ತು ತರಕಾರಿಕೊಳ್ಳುವ ಬದಲು 70 -110 ರೂಪಾಯಿ ವರೆಗೆ ಲಭ್ಯವಿರುವ ಚಿಕನ್, 250 - 300 ರೂಪಾಯಿ ವರೆಗಿನ ಒಳ್ಳೆ ಮಟನ್, 150 ರೂಪಾಯಿ ವರೆಗಿನ ಬಾರಕೋಡ ಮೀನು, ಅಥವಾ 80ವರೆಗಿನ ದರದಲ್ಲಿ ಲಭ್ಯವಿರುವ ಬಂಗುಡೆ ಮೀನು ತಿಂದರೆ ಆರೋಗ್ಯವೂ ತಂದುರುಸ್ತಾಗಿರುವುದಿಲ್ಲವೇ ಎಂದು ನನ್ನ ಪಕ್ಕದ ಮನೆಯ ಸುರೇಶ್ ರೈ ಹೇಳ್ತಾಯಿದಾರೆ. ಅವರು ಹೇಳುವುದೇನೋ ನಿಜಾನೆ. ಆದರೆ, ಧನುರ್ಮಾಸ ಮುಗಿಯುವವರೆಗೂ ನಮ್ಮ ಮನೆಯಲ್ಲಿ ಮಾಂಸಾಹಾರ ನಿಷಿದ್ಧ. ಅಲ್ಲಿಯವರೆಗೆ ಈರುಳ್ಳಿ, ತರಕಾರಿ ರೇಟುಗಳು ಕಡಿಮೆ ಆಗದೆ ಇದ್ದರೆ ನಮ್ಮನ್ನು ತಾಯಿ ಆಂಡಾಳಮ್ಮನೇ ಕಾಪಾಡಬೇಕು.
ಕಡೆ ಸುದ್ದಿ : ದೆಹಲಿಯಲ್ಲಿ ಈರುಳ್ಳಿ ಬೆಲೆ ಕೈಗೆಟುಕದ ದರಕ್ಕೆ ಏರುತ್ತಿದ್ದಂತೆ ಈರುಳ್ಳಿ ರಫ್ತು ನಿಷೇಧಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ದೆಹಲಿಯಲ್ಲಿ ಈರುಳ್ಳಿ ಕೆಜಿಗೆ 70 ರು. ತಲುಪಿದ್ದರೆ, ಬೆಂಗಳೂರಿನಲ್ಲಿ ಕೆಜಿಗೆ 80 ರು. ಈಗಲಾದರೂ ಮಾರಾಟಗಾರರು ಈರುಳ್ಳಿ ಬೆಲೆಯನ್ನು ಇಳಿಸುವರೆ? [ತರಕಾರಿ]