ಶ್ರೀರಾಮುಲುಸೇನೆಯಿಂದ ಚಿತ್ರದುರ್ಗ ಬಿಜೆಪಿ ಘಟಕ ಧ್ವಂಸ

ಲಕ್ಷ್ಮಿಸಾಗರ ಕ್ಷೇತ್ರದಿಂದ ಸ್ಥಳೀಯ ಶ್ರೀರಾಮುಲು ಸೇನೆಯ ಅಧ್ಯಕ್ಷ ರವಿ ಮದಕರಿ ಎಂಬವರ ಪತ್ನಿಗೆ ಟಿಕೆಟ್ ನೀಡದಿರುವುದೇ ಕಚೇರಿ ಧ್ವಂಸಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ರವಿ ಮದಕರಿ ತನ್ನ ಪತ್ನಿಗೆ ಟಿಕೆಟ್ ನೀಡುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ಯಾದವ್ಗೆ ಮನವಿ ಮಾಡಿದ್ದ. ಆದರೆ ಸಿದ್ದೇಶ್ ಟಿಕೆಟ್ ನೀಡಲು ನಿರಾಕರಿಸಿದ್ದರು.
ಇದರಿಂದ ಆಕ್ರೋಶಗೊಂಡ ರವಿ ಜಿಲ್ಲಾಧ್ಯಕ್ಷ ಸಿದ್ದೇಶ್ ಟಿಕೆಟ್ ಆಕಾಂಕ್ಷಿಗಳಿಗೆ ಟಿಕೆಟ್ ನೀಡದೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ವಿಧಾನ ಪರಿಷತ್ ಸದಸ್ಯ ಜಿ.ಎಚ್.ತಿಪ್ಪಾರೆಡ್ಡಿ ನಿವಾಸದ ಮುಂದೆ ಸಿದ್ದೇಶ್ ಮೇಲೆ ಹಲ್ಲೆ ನಡೆಸಿದ್ದರು.
ಹಲ್ಲೆಯಿಂದ ಕುಪಿತಗೊಂಡ ಸಿದ್ದೇಶ್, ಶ್ರೀರಾಮುಲು ಸೇನೆಯ ಅಧ್ಯಕ್ಷ ರವಿ ಮದಕರಿಯ ಮೇಲೆ ಪ್ರತಿಕಾರಕ್ಕಾಗಿ ಕಾಯುತ್ತಿದ್ದ ಎನ್ನಲಾಗಿದೆ. ಸಮಯ ಕಾಯುತ್ತಿದ್ದ ಸಿದ್ದೇಶ್ ಯಾದವ್ ಇಂದು ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ 'ನವೀನ ರೆಸಿಡೆನ್ಸಿ"ಗೆ ರವಿ ಮದಕರಿಯನ್ನು ಟಿಕೆಟ್ ನೀಡುವುದಾಗಿ ಕರೆಸಿ ಅಲ್ಲಿ ಹಲ್ಲೆ ನಡೆಸಿದ್ದ ಎನ್ನಲಾಗುತ್ತಿದೆ.
ಇದರಿಂದ ಮತ್ತಷ್ಟು ಆಕ್ರೋಶಗೊಂಡ ರವಿ ಮದಕರಿ ಹಾಗೂ ಶ್ರೀರಾಮುಲು ಸೇನೆಯ ಇತರ ಕಾರ್ಯಕರ್ತರು ಏಕಾಏಕಿ ಬಿಜೆಪಿ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಲ್ಲದೆ, ಕಚೇರಿಯೊಳಗಿದ್ದ ಎಲ್ಲ ಪೀಠೋಪಕರಣಗಳನ್ನು ಹೊರಗೆ ಎಳೆದು ಹಾಕಿ ಪುಡಿಗೈದಿದ್ದಾರೆ. ಜೊತೆಗೆ ಅದಕ್ಕೆ ಬೆಂಕಿ ಹಚ್ಚಲು ಮುಂದಾದಾಗ ಮಧ್ಯೆ ಪ್ರವೇಶಿಸಿದ ಪೊಲೀಸರು, ಏಳು ಮಂದಿ ಕಾರ್ಯಕರ್ತರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.












Click it and Unblock the Notifications